ನವದೆಹಲಿ: ಸೊಹ್ರಾಬುದ್ದೀನ್ ನಕಲಿ ಎನ್ ಕೌಂಟರ್ ಪ್ರಕರಣದ ಕೇಳಿದ ವಿಶೇಷ ಸಿಬಿಐ ನ್ಯಾಯಾಧೀಶ ಬಿ.ಎಚ್.ಲೋಯಾ ಅವರ ನಿಗೂಢ ಸಾವಿನ ಕುರಿತು ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್ ಇದೊಂದು "ಗಂಭೀರ ವಿಷಯ" ಎಂದು ಹೇಳಿದೆ. ಹಾಗೆಯೇ ಈ ಸಂಬಂಧ ಮಹಾರಾಷ್ಟ್ರ ಸರ್ಕಾರ ಸ್ವತಂತ್ರ ತನಿಖೆ ನಡೆಸಬೇಕು ಎಂದು ಮನವಿ ಮಾಡಿದೆ.
ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ ಮತ್ತು ಎಂ.ಎಂ ಶಾಂತನಗೌಡರ್ ಅವರನ್ನೊಳಗೊಂಡ ಪೀಠ ಜನವರಿ 15 ರೊಳಗೆ ಉತ್ತರವನ್ನು ಸಲ್ಲಿಸುವಂತೆ ಮಹಾರಾಷ್ಟ್ರ ಸರ್ಕಾರದ ಸಲಹೆಗಾರ ನಿಶಾಂತ್ ಆರ್ ಕತ್ನೇಶ್ವರಕರ್ ಅವರಿಗೆ ಸೂಚಿಸಿದೆ.
"ಬಾಂಬೆ ಹೈ ಕೋರ್ಟ್ ನಲ್ಲಿ ಈ ಪ್ರಕರಣ ವಿಚಾರಣೆ ನಡೆಯುತ್ತಿದ್ದು ಇದರ ಕುರಿತಂತೆ ಸುಪ್ರೀಂ ಕೋರ್ಟ್ ಯಾವ ಅಭಿಪ್ರಾಯಕ್ಕೆ ಬರಲು ಸಾದ್ಯವಿಲ್ಲ. ವಿಚಾರಣೆ ಮುಂದುವರಿದಂತೆ ಬಾಂಬೆ ಹೈ ಕೋರ್ಟ್ ನಿಂದಲೇ ಮೊದಲು ಫಲಿತಾಂಶ ಬರಬೇಕಿದೆ" ಹಿರಿಯ ನ್ಯಾಯವಾದಿ ದುಶ್ಯಂತ್ ದವೆ ಹೇಳಿದ್ದಾರೆ.
ಆದಾಗ್ಯೂ, ಸರ್ವೋಚ್ಚ ನ್ಯಾಯಾಲಯವು ಅರ್ಜಿಗಳ ಬಗ್ಗೆ ತನಿಖೆ ನಡೆಸಲಿದೆ ಎಂದು ಹೇಳಿದ್ದು ಆಕ್ಷೇಪಣೆಗಳನ್ನೂ ಸಹ ಪರಿಗಣಿಸಲಾಗುವುದು ಎಂದು ಪೀಠ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಪ್ರಕರಣ ಸಂಬಂಧ ಮುಂದಿನ ವಿಚಾರಣೆ ಜ.15ರಂದು ನಡೆಯಲಿದೆ.
ವಕೀಲ ವರೀಂದರ್ ಕುಮಾರ್ ಶರ್ಮಾ ಮತ್ತು ಕಾಂಗ್ರೆಸ್ ನಾಯಕ ತಹ್ಸೀನ್ ಪೂನಾವಾಲಾ ಡಿಸೆಂಬರ್ 1, 2014 ರಂದು ಸಂಭವಿಸಿದ ನ್ಯಾಯಾಧೀಶರ ನಿಗೂಢ ಸಾವಿನ ಪ್ರಕರಣವನ್ನು ತನಿಖೆಗೆ ಒಳಪಡಿಸಬೇಕೆಂದು ಹೇಳಿದ್ದರು.