ಅಹ್ಮದನಗರ: ಲಾಭದಾಯಕ ಹುದ್ದೆ ಹೊಂದಿದೆ ಆರೋಪದ ಮೇಲೆ 20 ಎಎಪಿ ಶಾಸಕರನ್ನು ಅನರ್ಹಗೊಳಿಸುವಂತೆ ಚುನಾವಣಾ ಆಯೋಗ ರಾಷ್ಟ್ರಪತಿಗಳಿಗೆ ಶಿಫಾರಸು ಮಾಡಿರುವುದು ದುರದೃಷ್ಟಕರ ಮತ್ತು ದುಃಖಕರ ಸಂಗತಿ ಎಂದು ಆಪ್ ನಾಯಕ ಕುಮಾರ್ ವಿಶ್ವಾಸ್ ಅವರು ಶನಿವಾರ ಹೇಳಿದ್ದಾರೆ.
'ಇದು ಅತ್ಯಂತ ದುರದೃಷ್ಟಕರ ಮತ್ತು ದುಃಖದ ವಿಚಾರ. ಈ ಹಿಂದೆ ಆಪ್ ಶಾಸಕರನ್ನು ಸಂಸದೀಯ ಕಾರ್ಯದರ್ಶಿಯನ್ನಾಗಿ ನೇಮಕ ಮಾಡುವ ವಿಚಾರದಲ್ಲಿ ನಾನು ಕೆಲವು ಸಲಹೆಗಳನ್ನು ನೀಡಿದ್ದೆ. ಆದರೆ ಅದು ಮುಖ್ಯಮಂತ್ರಿಗಳ ಪರಮಾಧಿಕಾರ ಎಂದು ಹೇಳಿದ್ದರಿಂದ ನಾನು ಸುಮ್ಮನಾಗಿದ್ದೆ' ಎಂದು ಕುಮಾರ್ ವಿಶ್ವಾಸ್ ತಿಳಿಸಿದ್ದಾರೆ.
ಈ ಮಧ್ಯೆ, ಆಮ್ ಆದ್ಮಿ ಶಾಸಕರ ಲಾಭದಾಯಕ ಹುದ್ದೆ ವಿರುದ್ಧ ವಿರುದ್ಧ ಚುನಾವಣಾ ಆಯೋಗಕ್ಕೆ ಅರ್ಜಿ ಸಲ್ಲಿಸಿದ್ದ ಪ್ರಶಾಂತ್ ಪಟೇಲ್ ಅವರು, 20 ಶಾಸಕರನ್ನು ಅನರ್ಹಗೊಳಿಸುವಂತೆ ರಾಷ್ಟ್ರಪತಿಗಳಿಗೆ ಶಿಫಾರಸು ಮಾಡಿರುವ ಚುನಾವಣಾ ಆಯೋಗದ ನಿರ್ಧಾರ ತಮಗೆ ತೃಪ್ತಿ ತಂದಿದೆ ಎಂದಿದ್ದಾರೆ.
ಚುನಾವಣಾ ಆಯೋಗ ನಿನ್ನೆ ಲಾಭದಾಯಕ ಹುದ್ದೆ ಹೊಂದಿರುವ 20 ಎಎಪಿ ಶಾಸಕರನ್ನು ಅನರ್ಹಗೊಳಿಸುವಂತೆ ರಾಷ್ಟ್ರಪತಿ ರಾಮನಾಥ್ ಕೊವಿಂದ್ ಅವರಿಗೆ ಶಿಫಾರಸು ಮಾಡಿದೆ. ಇದನ್ನು ಪ್ರಶ್ನಿಸಿ ಆಪ್ ಶಾಸಕರು ದೆಹಲಿ ಹೈಕೋರ್ಟ್ ಗೆ ಮನವಿ ಸಲ್ಲಿಸಿದ್ದು, ಹೈಕೋರ್ಟ್ ಆಯೋಗದಿಂದ ವರದಿ ಕೇಳಿದೆ.