ಜೈಪುರ: ಪದ್ಮಾವತ್ ಚಿತ್ರದ ಬಿಡುಗಡೆಗೆ ಪ್ರಬಲ ವಿರೋಧ ವ್ಯಕ್ತಪಡಿಸಿದ್ದ ಶ್ರೀ ರಜಪೂತ್ ಕರ್ಣಿ ಸೇನೆ ಇಂದು ಭನ್ಸಾಲಿ ಚಿತ್ರವನ್ನು ವೀಕ್ಷಿಸಲು ಸಿದ್ದವಿದೆ ಎಂದು ತಿಳಿಸಿದೆ.
ಜನವರಿ 25 ರಂದು ಬಿಡುಗಡೆಗೊಳ್ಳಲಿರುವ ಈ ಚಲನಚಿತ್ರದಲ್ಲಿ ಐತಿಹಾಸಿಕ ಸತ್ಯಗಳನ್ನು ತಿರುಚಲಾಗಿದ್ ಎಂದು ಆರೋಪಿಸಿದ್ದ ಕರ್ಣಿ ಸೇನೆ ಮತ್ತಿತರೆ ರಜಪೂತ ಬೆಂಬಲಿತ ಸಂಘಗಳು ಚಿತ್ರ ಬಿಡುಗಡೆಗೆ ವಿರೋಧ ವ್ಯಕ್ತಪಡಿಸಿದ್ದವು.
"ನಾವು ಚಲನಚಿತ್ರವನ್ನು ವೀಕ್ಷಿಸಲು ಸಿದ್ಧರಿದ್ದೇವೆ ನಾವು ಚಲನಚಿತ್ರವನ್ನು ನೋಡುವುದಿಲ್ಲ ಎಂದು ನಾವು ಎಂದಿಗೂ ಹೇಳಿರಲಿಲ್ಲ. ಚಿತ್ರದ ನಿರ್ದೇಶಕರು ನಮಗಾಗಿ ವಿಶೇಷ ಪ್ರದರ್ಶನ ಏರ್ಪಡಿಸುತ್ತಿರುವುದಾಗಿ ಬರೆದಿದ್ದಾರೆ. ನಾವು ಅದಕ್ಕೆ ಒಪ್ಪಿದ್ದೇವೆ" ಕರ್ಣಿ ಸೇನೆಯ ಅಧ್ಯಕ್ಷರಾದ ಲೋಕೆಂದ್ರ ಸಿಂಗ್ ಕಾಲ್ವಿ ಪಿಟಿಐ ಗೆ ತಿಳಿಸಿದರು.
ಜನವರಿ 20 ರಂದು ಭನ್ಸಾಲಿ, ಶ್ರೀ ರಜಪೂತ್ ಕರ್ಣಿ ಸೇನಾ ಮತ್ತು ರಜಪೂತ್ ಸಭಾ, ಜೈಪುರಕ್ಕೆ ಪತ್ರವೊಂದನ್ನು ಬರೆದಿದ್ದು, ಚಲನಚಿತ್ರವನ್ನು ವೀಕ್ಷಿಸಲು ಅವರನ್ನು ಆಹ್ವಾನಿಸಿದ್ದರು ಮತ್ತು ರಜಪೂತ ಸಮುದಾಯದ ಗೌರವ ಮತ್ತು ಶೌರ್ಯವನ್ನು ಈ ಚಿತ್ರವು ಪ್ರದರ್ಶಿಸಲಿದೆ ಎಂದು ಭರವಸೆ ನೀಡಿದ್ದರು.