ನವದೆಹಲಿ: ವಿವಾದಿತ ಪದ್ಮಾವತ್ ಚಿತ್ರದ ವಿರುದ್ಧ ಪ್ರತಿಭಟನೆ ವೇಳೆ ಕರ್ಣಿ ಸೇನೆಯ ಕಾರ್ಯಕರ್ತರು ಗುರುಗ್ರಾಮದ ಶಾಲಾ ಬಸ್ ಮೇಲೆ ದಾಳಿ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕಿಡಿಕಾರಿದ್ದಾರೆ.
ಮುಸ್ಲಿಂರ ಹತ್ಯೆ, ದಲಿತರ ಹತ್ಯೆ ಆದಾಗಲೂ ಸಹಿಸಿಕೊಂಡಿದ್ದೇವೆ. ಆದರೆ ಮಕ್ಕಳ ಮೇಲಿನ ದೌರ್ಜನ್ಯವನ್ನು ಸಹಿಸಲು ಸಾಧ್ಯವಿಲ್ಲ. ಇಂತಹ ದುಷ್ಕರ್ಮಿಗಳನ್ನು ಸುಮ್ಮನೆ ಬಿಡುವುದಿಲ್ಲ ಎಂದು ಕರ್ಣಿ ಸೇನೆಗೆ ಅರವಿಂದ್ ಕೇಜ್ರಿವಾಲ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಛತ್ರಸಾಲಾ ಸ್ಟೇಡಿಯಂನಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಕೇಜ್ರಿವಾಲ್ ಅವರು, ಮಕ್ಕಳ ಮೇಲೆ ದಾಳಿ ನಡೆಸುವವರಿಗೆ ನಾಚಿಕೆಯಾಗಬೇಕು. ರಾಮನ ಭೂಮಿ ಭಾರತ. ಮಕ್ಕಳ ಮೇಲೆ ದಾಳಿ ನಡೆಸುವಂತಹ ಅಮಾನವೀಯತೆಯನ್ನು ಸಹಿಸುವುದಿಲ್ಲ ಎಂದು ಹೇಳಿದ್ದಾರೆ.
ಗಣ ರಾಜ್ಯೋತ್ಸವದ ಸಂದರ್ಭದಲ್ಲಿ ಮಕ್ಕಳ ಮೇಲಿನ ದಾಳಿಯಂತಹ ಕೃತ್ಯಗಳು ನಡೆದಿದ್ದು ನಾಚಿಕೆಗೇಡು. ಇದೊಂದು ದುರಾದೃಷ್ಟಕರ ಘಟನೆ. ಶಾಲಾ ವಾಹನದ ಮೇಲೆ ದಾಳಿ ನಡೆಸಿ ಮಕ್ಕಳಲ್ಲಿ ಭೀತಿ ಹುಟ್ಟಿಸಿದ ಕೃತ್ಯದ ಬಗ್ಗೆ ಕೇಳಿ ಕಳೆದ ರಾತ್ರಿ ನಿದ್ರೆಯೇ ಬರಲಿಲ್ಲ ಎಂದು ಹೇಳಿದರು.
ನಾನು ಹಿಂದು. ನಾನು ರಾಮ ಭಕ್ತ. ರಾಮ ಯಾವತ್ತಾದರೂ ಮಕ್ಕಳ ಮೇಲೆ ದಾಳಿ ನಡೆಸಲು ಅವಕಾಶ ನೀಡುತ್ತಾನೆಯೇ ಎಂದು ಪ್ರಶ್ನಿಸಿದ್ದಾರೆ.
ಭರತ ಭೂಮಿಯಲ್ಲಿ ರಾಮ, ಕೃಷ್ಣ, ಗೌತಮ ಬುದ್ಧ, ಮಹಾವೀರ ಜೈನ್, ಗುರು ನಾನಕ್ ದೇವ್, ಕಬೀರ, ಮಹಾತ್ಮ ಗಾಂಧಿ, ಪ್ರವಾದಿ ಮೊಹಮ್ಮದ್, ಜೀಸಸ್ ರಂತ ಮಹಾನ್ ಪುರುಷರು ಶಾಂತಿಯನ್ನೇ ಪ್ರತಿಪಾದಿಸಿದರು ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.