ಜೈಪುರ: ರಾಜಸ್ಥಾನದ ಒಂದು ವಿಧಾನಸಭಾ ಕ್ಷೇತ್ರ ಮತ್ತು ಎರಡು ಲೋಕಸಭಾ ಕ್ಷೇತ್ರಗಳಿಗೆ ಕಳೆದ ಸೋಮವಾರ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಮುನ್ನಡೆ ಸಾಧಿಸಿದ್ದು, ವಿಧಾನಸಭಾ ಕ್ಷೇತ್ರದಲ್ಲಿ ಈಗಾಗಲೇ ಗೆಲುವಿನ ನಗೆ ಬೀರಿದೆ ಮತ್ತು ಎರಡು ಲೋಕಸಭಾ ಕ್ಷೇತ್ರಗಳಲ್ಲೂ ಮುನ್ನಡೆ ಕಾಯ್ದುಕೊಂಡಿದೆ.
ಎಎನ್ಐ ವರದಿ ಪ್ರಕಾರ, ಮಂಡಲಗಢ ಕ್ಷೇತ್ರದಲ್ಲಿ ಕಾಂಗ್ರೆಸ್ ನ ವಿವೇಕ್ ಧಾಕಡ್ ಅವರು 12976 ಮಂತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಆಲ್ವಾರ್ ಹಾಗು ಅಜ್ಮೀರ್ ನಲ್ಲಿ ಕಾಂಗ್ರೆಸ್ ಭಾರೀ ಮುನ್ನಡೆಯಲ್ಲಿದೆ. ಈ ಎರಡೂ ಕ್ಷೇತ್ರಗಳು ಆಡಳಿತರೂಢ ಬಿಜೆಪಿ ಕೈಯಲ್ಲಿವೆ. ಅಲ್ವಾರ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕರಣ್ ಸಿಂಗ್ ಯಾದವ್ ಅವರು ಬಿಜೆಪಿಯ ಜಸ್ವಂತ್ ಸಿಂಗ್ ಯಾದವ್ ಅವರ ವಿರುದ್ಧ ಮುನ್ನಡೆ ಸಾಧಿಸಿದ್ದಾರೆ. ಇನ್ನು ಅಜ್ಮೀರ್ ನಲ್ಲಿ ಕಾಂಗ್ರೆಸ್ ನ ರಘು ಶರ್ಮಾ ಅವರು ಬಿಜೆಪಿ ರಾಮ್ ಸ್ವರೂಪ್ ಲಾಂಬಾ ಅವರ ವಿರುದ್ಧ ಮುನ್ನಡೆ ಸಾಧಿಸಿದ್ದಾರೆ.
ಜನವರಿ 29ರಂದು ರಾಜಸ್ಥಾನದ ಎರಡು ಲೋಕಸಭಾ ಹಾಗು ಒಂದು ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆದಿತ್ತು. ಈ ಚುನಾವಣೆಯು ಆಡಳಿತಾರೂಢ ಬಿಜೆಪಿ ಸರ್ಕಾರಕ್ಕೆ ಅತ್ಯಂತ ಮಹತ್ವದ್ದಾಗಿದೆ. ಪದ್ಮಾವತ್ ಚಿತ್ರದ ವಿವಾದದಿಂದಾಗಿ ವರ್ಷಾಂತ್ಯಕ್ಕೆ ನಡೆಯುವ ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಯಾವ ಪಕ್ಷಕ್ಕೆ ಲಾಭವಾಗಲಿದೆ ಎಂಬ ಪ್ರಶ್ನೆಗಳಿಗೆ ಇಂದು ಉತ್ತರ ಸಿಕ್ಕಿದೆ.