ದೇಶ
ಸುಪ್ರೀಂ ಆದೇಶ ಗೌರವಿಸಬೇಕು; ಕೇಜ್ರಿವಾಲ್; ದೆಹಲಿ ಅಭಿವೃದ್ಧಿಗೆ ಸಹಕಾರ ನೀಡುವೆ: ಲೆ.ಗವರ್ನರ್
ಉತ್ತಮ ಆಡಳಿತ ಮತ್ತು ದೆಹಲಿ ಸಮಗ್ರ ಅಭಿವೃದ್ಧಿಗಾಗಿ ಆಪ್ ಸರ್ಕಾರಕ್ಕೆ ಬೆಂಬಲ ಮತ್ತು ಸಹಕಾರ ನೀಡುವುದಾಗಿ ದೆಹಲಿ...
ನವದೆಹಲಿ: ಉತ್ತಮ ಆಡಳಿತ ಮತ್ತು ದೆಹಲಿ ಸಮಗ್ರ ಅಭಿವೃದ್ಧಿಗಾಗಿ ಆಪ್ ಸರ್ಕಾರಕ್ಕೆ ಬೆಂಬಲ ಮತ್ತು ಸಹಕಾರ ನೀಡುವುದಾಗಿ ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರು ಶುಕ್ರವಾರ ಭರವಸೆ ನೀಡಿದ್ದಾರೆ. ಆದರೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸುಪ್ರೀಂ ಕೋರ್ಟ್ ಆದೇಶ ಗೌರವಿಸಬೇಕು ಎಂದು ಪ್ರತಿಪಾದಿಸಿದ್ದಾರೆ.
ದೆಹಲಿ ಲೆಫ್ಟಿನೆಂಟ್ ಗವರ್ನರ್ ಗೆ ಸ್ವತಂತ್ರ ಅಧಿಕಾರ ಇಲ್ಲ. ಚುನಾಯಿತ ಸರ್ಕಾರದ ಸಲಹೆಗೆ ಬದ್ಧವಾಗಿರಬೇಕು ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದ ಬೆನ್ನಲ್ಲೇ ದೆಹಲಿ ಸಿಎಂ ಕೇಜ್ರಿವಾಲ್ ಮತ್ತು ಉಪ ಮುಖ್ಯಮಂತ್ರಿ ಮನಿಶ್ ಸಿಸೋಡಿಯಾ ಅವರು ಇಂದು ಅನಿಲ್ ಬೈಜಾಲ್ ಅವರನ್ನು ಭೇಟಿ ಮಾಡಿದರು.
ಸಿಎಂ ಅರವಿಂದ್ ಕೇಜ್ರಿವಾಲ್ ಮತ್ತು ಡಿಸಿಎಂ ಮನಿಶ್ ಸಿಸೋಡಿಯಾ ಅವರು ಇಂದು ನನ್ನನ್ನು ಭೇಟಿ ಮಾಡಿದ್ದರು. ದೆಹಲಿ ಸಮಗ್ರ ಅಭಿವೃದ್ಧಿಗೆ ಮತ್ತು ಉತ್ತಮ ಆಡಳಿತಕ್ಕಾಗಿ ನನ್ನ ಸಹಕಾರ ಮತ್ತು ಬೆಂಬಲ ಮುಂದುವರೆಯಲಿದೆ ಎಂದು ಅವರಿಗೆ ಭರವಸೆ ನೀಡಿರುವುದಾಗಿ ಬೈಜಾಲ್ ಅವರು ಟ್ವೀಟ್ ಮಾಡಿದ್ದಾರೆ.
ಬೆಂಬಲ ಹಾಗೂ ಸಹಕಾರ ನೀಡುವ ಭರವಸೆ ನೀಡಿದ ಬೈಜಾಲ್ ಅವರಿಗೆ ಕೇಜ್ರಿವಾಲ್ ಅವರು ಧನ್ಯವಾದ ಹೇಳಿದ್ದು, ದೆಹಲಿ ಅಭಿವೃದ್ಧಿಗೆ ಒಟ್ಟಾಗಿ ಕೆಲಸ ಮಾಡುವ ಇಚ್ಛೆ ವ್ಯಕ್ತಪಡಿಸಿದ್ದಾರೆ.
'ಧನ್ಯವಾದಗಳು ಸರ್, ರಾಷ್ಟ್ರ ರಾಜಧಾನಿಯ ಅಭಿವೃದ್ಧಿಗಾಗಿ ನಾವು ಎಲ್ಲರೂ ಒಟ್ಟಿಗೆ ಕೆಲಸ ಮಾಡಬೇಕಾಗಿದೆ. ಸಂವಿಧಾನವೇ ಸುಪ್ರೀಂ. ಸುಪ್ರೀಂ ಕೋರ್ಟ್ ಆದೇಶಗಳೇ ಈ ನಾಡಿನ ಕಾನೂನು. ಕೋರ್ಟ್ ಆದೇಶವನ್ನು ಗೌರವಿಸಬೇಕು' ಎಂದು ಬೈಜಾಲ್ ಅವರ ಟ್ವೀಟ್ ಗೆ ದೆಹಲಿ ಸಿಎಂ ಪ್ರತಿಕ್ರಿಯಿಸಿದ್ದಾರೆ.
ಇದಕ್ಕು ಮುನ್ನ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕೇಜ್ರಿವಾಲ್ ಅವರು, ಕೇಂದ್ರ ಸರ್ಕಾರ ಹಾಗೂ ಲೆಫ್ಟಿನೆಂಟ್ ಗವರ್ನರ್ ವಿರುದ್ಧ ವಾಗ್ದಾಳಿ ನಡೆಸಿದ್ದರು.