ಮಧ್ಯಪ್ರದೇಶ: ಈ ವರ್ಷದ ಅಂತ್ಯಭಾಗದಲ್ಲಿ ಮಧ್ಯಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್ ಮುಖಂಡರಾದ ಕಮಲ್ ನಾಥ್ ಹಾಗೂ ಜ್ಯೋತಿರಾದಿತ್ಯ ಸಿಂದಿಯಾ ಬೆಂಬಲಿಗರ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟರ್ ವಾರ್ ಶುರು ಆಗಿದೆ.
ಕಮಲ್ ನಾಥ್ ಹಾಗೂ ಜ್ಯೋತಿರಾದಿತ್ಯ ಸಿಂದಿಯಾ ಬೆಂಬಲಿಗರು ಪ್ರತ್ಯೇಕವಾಗಿ ಪೋಸ್ಟರ್ ಹಾಕುತ್ತಿದ್ದು, ತಮ್ಮ ತಮ್ಮ ನಾಯಕನನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸುತ್ತಿದ್ದಾರೆ. ಸಿಂದಿಯಾ ರಾಜ್ಯ ಕಾಂಗ್ರೆಸ್ ಪ್ರಚಾರ ಸಮಿತಿ ಮುಖ್ಯಸ್ಥರಾಗಿದ್ದರೆ. ಕಮಲ್ ನಾಥ್ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿದ್ದಾರೆ.
ಕೆಲ ಪೋಸ್ಟರ್ ಗಳಲ್ಲಿ ರಾಹುಲ್ ಗಾಂಧಿ ಮತ್ತು ಕಮಲ್ ನಾಥ್ ಮಧ್ಯಪ್ರದೇಶದ ಜವಾಬ್ದಾರಿ ತೆಗೆದುಕೊಳ್ಳಲಿದ್ದಾರೆ ಎಂಬ ಸಂದೇಶ ಹಾಕಲಾಗುತ್ತಿದ್ದು, ಫೇಸ್ ಬುಕ್ ಹಾಗೂ ವಾಟ್ಸಪ್ ಗುಂಪುಗಳಲ್ಲಿ ಕಮಲ್ ನಾಥ್ ಮುಂದಿನ ಮುಖ್ಯಮಂತ್ರಿ ಎಂಬ ಹ್ಯಾಸ್ ಟಾಗ್ ಟ್ರೆಂಡಿಂಗ್ ಆಗುತ್ತಿದೆ.
ಇನ್ನೂ ಕೆಲವು ಪೋಸ್ಟರ್ ಗಳಲ್ಲಿ ಕೇಂದ್ರದಲ್ಲಿ ರಾಹುಲ್ ಗಾಂಧಿ ಹಾಗೂ ಮಧ್ಯಪ್ರದೇಶದಲ್ಲಿ ಸಿಂದಿಯಾ ನೇತೃತ್ವದಲ್ಲಿ ನೇತೃತ್ವದಲ್ಲಿ ಅಭಿವೃದ್ದಿ ಪರ ಅಲೆ ಏಳಲಿದೆ ಎಂಬ ಸಂದೇಶ ಹಾಕಲಾಗುತ್ತಿದೆ. ಶ್ರೀಮತ್ ಸಿಂದಿಯಾ ಪ್ಯಾನ್ಸ್ ಕ್ಲಬ್ ಹೆಸರಿನಲ್ಲಿ ಈ ರೀತಿ ಪೋಸ್ಟ್ ಮಾಡಲಾಗುತ್ತಿದೆ.
ಮಾಜಿ ಕೇಂದ್ರ ಸಚಿವ ಕಮಲ್ ನಾಥ್ ಚಿಂದ್ವಾರದಿಂದ ಸಂಸದರಾಗಿದ್ದು, ಈ ವರ್ಷದ ಏಪ್ರಿಲ್ ತಿಂಗಳಲ್ಲಿ ಅವರನ್ನು ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಕಾಂಗ್ರೆಸ್ ಹೈಕಮಾಂಡ್ ಈವರೆಗೂ ಯಾರನ್ನೂ ಕೂಡಾ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಬಿಂಬಿಸಿಲ್ಲ. ಚುನಾವಣೆ ನಂತರ ಶಾಸಕಾಂಗ ಸಭೆಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುತ್ತದೆ ಎನ್ನಲಾಗುತ್ತದೆ.
ಈ ಮಧ್ಯೆ ಕಾಂಗ್ರೆಸ್ ಆಡಳಿತಾರೂಢ ಬಿಜೆಪಿ ಇಂತಹ ಪೋಸ್ಟರ್ ತಯಾರಿಸಿ , ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತಿದೆ ಎಂದು ರಾಜ್ಯ ಕಾಂಗ್ರೆಸ್ ಮುಖ್ಯ ವಕ್ತಾರ ಮಾನಕ್ ಅಗರ್ ವಾಲ್ ಆರೋಪಿಸಿದ್ದಾರೆ. ಈ ಆರೋಪವನ್ನು ಬಿಜೆಪಿ ರಾಜ್ಯ ಐಟಿ ಘಟಕ ನಿರಾಕರಿಸಿದ್ದು, ಬಿಜೆಪಿ ಇಂತಹ ಪೋಸ್ಟರ್ ವಾರ್ ಮಾಡಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್, ಕಮಲ್ ನಾಥ್ , ಸಿಂದಿಯಾ ಹಾಗೂ ಸುರೇಶ್ ಪಚೋರಿ ನಡುವಿನ ಆಂತರಿಕ ತಿಕ್ಕಾಟದಿಂದಾಗಿ ಕಾಂಗ್ರೆಸ್ ಪಕ್ಷ ಹಾಗೂ ಕಾರ್ಯಕರ್ತರ ನಡುವೆ ಒಡಕು ಮೂಡಿಸಲಾಗುತ್ತಿದೆ ಎಂಬಂತಹ ಅಭಿಪ್ರಾಯಗಳು ಕೇಳಿಬರುತ್ತಿವೆ.
Advertisement