ನವದೆಹಲಿ: ರಾಹುಲ್ ಗಾಂಧಿ ವಿದೇಶಿ ಮೂಲದ ಬಗ್ಗೆ ಮಾತನಾಡಿದ್ದ ಬಿಎಸ್ ಪಿ ರಾಷ್ಟ್ರೀಯ ಸಂಯೋಜಕನ ವಿರುದ್ಧ ಮಾಯಾವತಿ ಕ್ರಮ ಕೈಗೊಂಡಿದ್ದಾರೆ. ಈ ಬೆಳವಣಿಗೆ 2019 ರ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ನೇತೃತ್ವದಲ್ಲಿ ಉಳಿದ ಪ್ರಾದೇಶಿಕ ಪಕ್ಷಗಳು ಮಹಾಘಟಬಂಧನ ರಚನೆ ಮಾಡುತ್ತವೆ ಎಂಬ ಊಹಾಪೋಹಗಳಿಗೆ ಇಂಬು ನೀಡುವಂತಿದೆ.
ಪಕ್ಷದ ಸಂಯೋಜಕ ಹುದ್ದೆಯಲ್ಲಿದ್ದ ಜೈ ಪ್ರಕಾಶ್ ಸಿಂಗ್ ಅವರನ್ನು ಹುದ್ದೆಯಿಂದ ವಜಾಗೊಳಿಸಿರುವ ಮಾಯಾವಗಿ 2019 ರ ಲೋಕಸಭಾ ಚುನಾವಣೆಗೆ ಮೈತ್ರಿ ರಚನೆಯಾಗುವುದರ ಬಗ್ಗೆ ಅಧಿಕೃತ ಘೋಷಣೆ ಹೊರಬೀಳುವವರೆಗೂ ಪಕ್ಷದಲ್ಲಿ ಯಾರೊಬ್ಬರೂ ಮೈತ್ರಿಯ ಬಗ್ಗೆ ಮಾತನಾಡಬಾರದು ಎಂದು ಹೇಳಿದ್ದಾರೆ.
ವಿಪಕ್ಷಗಳ ನಾಯಕರ ವಿರುದ್ಧ ವೈಯಕ್ತಿಕ ವಿಷಯಗಳನ್ನಿಟ್ಟುಕೊಂಡು ವಾಗ್ದಾಳಿ ನಡೆಸಿರುವುದಕ್ಕಾಗಿ ಜೈ ಪ್ರಕಾಶ್ ಸಿಂಗ್ ಅವರನ್ನು ಪಕ್ಷದ ಸಂಯೋಜಕ ಹುದ್ದೆಯಿಂದ ವಜಾ ಮಾಡುತ್ತಿರುವುದಾಗಿ ಮಾಯಾವತಿ ಹೇಳಿದ್ದಾರೆ.
ರಾಹುಲ್ ಗಾಂಧಿ ಅವರ ವಿದೇಶಿ ಮೂಲವನ್ನು ಉಲ್ಲೇಖಿಸಿ ಮಾತನಾಡಿದ್ದ ಜೈ ಪ್ರಕಾಶ್ ಸಿಂಗ್ ರಾಹುಲ್ ಗಾಂಧಿ ಅವರ ತಾಯಿ ವಿದೇಶಿಗರಾಗಿರುವುದರಿಂದ ರಾಹುಲ್ ಗಾಂಧಿ ದೇಶದ ಪ್ರಧಾನಿಯಾಗುವುದಕ್ಕೆ ಸಾಧ್ಯವಿಲ್ಲ ಎಂದು ಜೈ ಪ್ರಕಾಶ್ ಸಿಂಗ್ ಹೇಳಿದ್ದರು.