ಮುಂಬೈ: ತಮಿಳುನಾಡಿನ ತೂತ್ತುಕುಡಿ ನಿವಾಸಿಗಳ ಹಿಂಸಾತ್ಮಕ ಪ್ರತಿಭಟ ಹಿನ್ನೆಲೆಯಲ್ಲಿ ಬಂದ್ ಆಗಿರುವ ಸ್ಟೆರ್ಲೈಟ್ ತಾಮ್ರ ಸಂಸ್ಕರಣ ಘಟಕದಿಂದ ವೇದಾಂತ ಲಿಮಿಟೆಡ್ ಗೆ ಸುಮಾರು 100 ಮಿಲಿಯನ್ ಡಾಲರ್ ನಷ್ಟ ಆಗಿದೆ ಎಂದು ವೇದಾಂತ ಗ್ರೂಪ್ ಅಧ್ಯಕ್ಷ ಅನಿಲ್ ಅಗರವಾಲ್ ಅವರು ಶುಕ್ರವಾರ ಹೇಳಿದ್ದಾರೆ.
ಹಿಂಸಾಚಾರಕ್ಕೆ 13 ಮಂದಿ ಬಲಿಯಾದ ಬಳಿಕ ತಮಿಳುನಾಡು ಸರ್ಕಾರ ಕಳೆದ ಮೇ ತಿಂಗಳಲ್ಲಿ ಸ್ಟೆರ್ಲೈಟ್ ತಾಮ್ರ ಕಂಪನಿಗೆ ವಿದ್ಯುತ್ ಸ್ಥಗಿತಗೊಳಿಸುಲ ಮೂಲಕ ಘಟಕವನ್ನು ಮುಚ್ಚಲಾಗಿದೆ.
ಈ ತಾಮ್ರ ಘಟಕ ನಮ್ಮ ಬ್ಯಾಲೆನ್ಸ್ ಶೀಟ್ ನ ಶೇ.2ರಷ್ಟು ಇದೆ. ಘಟಕ ವರ್ಷಪೂರ್ತಿ ಬಂದ್ ಮಾಡಿದರೆ ಸುಮಾರು 100 ಮಿಲಿಯನ್ ಡಾಲರ್ ನಷ್ಟವಾಗಲಿದೆ ಎಂದು ಅಗರವಾಲ್ ಅವರು ಇಟಿ ನೌ ಚಾನಲ್ ಗೆ ತಿಳಿಸಿದ್ದಾರೆ.
ಒಂದು ವೇಳೆ ತಮಿಳುನಾಡು ಸರ್ಕಾರ ತಾಮ್ರ ಸಂಸ್ಕರಣಾ ಘಟಕವನ್ನು ಖಾಯಂ ಆಗಿ ಬಂದ್ ಮಾಡಬೇಕು ಎಂದು ಆದೇಶಿಸಿದರೆ ನಿಮ್ಮ ಮುಂದಿನ ಆಯ್ಕೆ ಏನು? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಏನೇ ಆದೇಶ ಬಂದರೂ ಒಪ್ಪಿಕೊಳ್ಳುತ್ತೇವೆ ಎಂದಿದ್ದಾರೆ.