ಆಳ್ವಾರ್​ ಗುಂಪು ಹತ್ಯೆ; ಪೊಲೀಸ್ ವಶದಲ್ಲಿದ್ದಾಗ ವ್ಯಕ್ತಿ ಸಾವು: ರಾಜಸ್ಥಾನ ಗೃಹ ಸಚಿವ

ಕಳೆದ ಶುಕ್ರವಾರ ಗೋ ರಕ್ಷಕರಿಂದ ಹಲ್ಲೆಗೊಳಗಾಗಿದ್ದ ವ್ಯಕ್ತಿಯು ಪೊಲೀಸ್​ ವಶದಲ್ಲಿದ್ದಾಗಲೇ ಮೃತಪಟ್ಟಿದ್ದಾರೆ....
ರಕ್ಬರ್​ ಖಾನ್
ರಕ್ಬರ್​ ಖಾನ್
ಆಳ್ವಾರ್​: ಕಳೆದ ಶುಕ್ರವಾರ ಗೋ ರಕ್ಷಕರಿಂದ ಹಲ್ಲೆಗೊಳಗಾಗಿದ್ದ ವ್ಯಕ್ತಿಯು ಪೊಲೀಸ್​ ವಶದಲ್ಲಿದ್ದಾಗಲೇ ಮೃತಪಟ್ಟಿದ್ದಾರೆ ಎಂದು ರಾಜಸ್ಥಾನ ಗೃಹ ಸಚಿವ ಗುಲಾಬ್​ ಛಾಂದ್​ ಕಠಾರಿಯಾ ಅವರು ಮಂಗಳವಾರ ತಿಳಿಸಿದ್ದಾರೆ.
ಇಂದು ಘಟನೆ ನಡೆದ ಆಲ್ವಾರ್ ಜಿಲ್ಲೆಯ ರಾಮಘರ್ ಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವರು, ಈಗ ಸಂಗ್ರಹಿಸಲಾಗಿರುವ ದಾಖಲೆಯ ಪ್ರಕಾರ 28 ವರ್ಷದ ರಕ್ಬರ್​ ಖಾನ್​ ಪೊಲೀಸ್​ ಕಸ್ಟಡಿಯಲ್ಲಿ ಸಾವಿಗೀಡಾಗಿದ್ದಾನೆ ಎಂದು ತಿಳಿದುಬಂದಿದೆ. ಈ ಕುರಿತು ನ್ಯಾಯಾಂಗ ತನಿಖೆಗೆ ಆದೇಶಿಸಲಾಗುವುದು ಎಂದು ಹೇಳಿದ್ದಾರೆ.
ತನಿಖೆಯಲ್ಲಿ ಪೊಲೀಸರು ಮೊದಲು ಗೋವುಗಳನ್ನು ಗೋಶಾಲೆಗೆ ಬಿಟ್ಟಿರುವುದು ಪತ್ತೆಯಾಗಿದೆ. ಅವರು ಹೀಗೆ ಮಾಡಿದ್ದು ತಪ್ಪು ಮತ್ತು ವ್ಯಕ್ತಿಯ ಸಾವಿಗೆ ಪೊಲೀಸರ ವಿಳಂಬವೇ ಕಾರಣ ಎಂದು ಗೃಹ ಸಚಿವರು ಹೇಳಿದ್ದಾರೆ.
ಇದೇ ವೇಳೆ ಸಂತ್ರಸ್ತ ಕುಟುಂಬಕ್ಕೆ 1.25 ಲಕ್ಷ ಪರಿಹಾರ ಧನವನ್ನು ನೀಡಲು ಸಚಿವರು ಆದೇಶಿಸಿದರು.
ಶುಕ್ರವಾರ ರಕ್ಬರ್​ ಖಾನ್ ಹಾಗೂ ಆತನ ಸ್ನೇಹಿತ ಅಸ್ಲಾಂ ಹರಿಯಾಣದಲ್ಲಿರುವ ತಮ್ಮ ಗ್ರಾಮಕ್ಕೆ ಎರಡು ದನಗಳನ್ನು ಕೊಂಡೊಯ್ಯುತ್ತಿದ್ದರು. ರಾಮಘರ್ ​ನಲ್ಲಿರುವ ಅರಣ್ಯ ಪ್ರದೇಶದ ಮಾರ್ಗವಾಗಿ ತೆರಳುವಾಗ ಗೋರಕ್ಷಕರು ಅವರ ಮೇಲೆ ದಾಳಿ ಮಾಡಿದ್ದರು. ಈ ವೇಳೆ ಅಸ್ಲಾಂ ತಪ್ಪಿಸಿಕೊಂಡು ಪರಾರಿಯಾಗಿದ್ದ, ಆದರೆ, ರಕ್ಬರ್​ ಖಾನ್​ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೊದಲು ದನಗಳನ್ನು ಗೋಶಾಲೆಗೆ ಬಿಟ್ಟಿದ್ದರು. ಬಳಿಕ ಮೂರು ಗಂಟೆ ತಡವಾಗಿ ಗಾಯಾಳು ರಕ್ಬರ್ ಖಾನ್ ನನ್ನು ಆಸ್ಪತ್ರೆಗೆ ಸಾಗಿಸಿದ್ದರು. ಆದರೆ ದಾರಿ ಮಧ್ಯೆಯೇ ರಕ್ಬರ್ ಖಾನ್ ಮೃತಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com