ನವದೆಹಲಿ: ಚರ್ಚುಗಳಲ್ಲಿ ಬಳಕೆಯಲ್ಲಿರುವ ತಪ್ಪೊಪ್ಪಿಗೆ ಅಥವಾ ಕನ್ಫೇಷನ್ ಅಭ್ಯಾಸವು ಕ್ರೈಸ್ತಧರ್ಮದ ಅವಿಭಾಜ್ಯ ಅಂಗವಾಗಿದೆ ಹೀಗಾಗಿ ಇದರ ನಿಷೇಧಕ್ಕೆ ಅವಕಾಶವಿಲ್ಲ ಎಂದು ಹೇಳಿ ರಾಷ್ಟ್ರೀಯ ಮಹಿಳಾ ಆಯೋಗದ ಶಿಪಾರಸನ್ನು ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗ ತಳ್ಳಿ ಹಾಕಿದೆ.
ರಾಷ್ಟ್ರೀಯ ಮಹಿಳಾ ಆಯೋಗ(ಎನ್ಸಿಡಬ್ಲ್ಯೂ) ಅಧ್ಯಕ್ಷೆ ರೇಖಾ ಶರ್ಮಾ ಮಹಿಳೆಯರ ಬೆದರ್ಕೆ ಪ್ರಕರಣ ನಡೆಯಲಿ ಕ್ರೈಸ್ತ ಧರ್ಮದ ಈ ಕನ್ಫೇಷನ್ ಆಚರಣೆ ಅವಕಾಶ ಮಾಡಿಕೊಡಲಿದೆ. ಹೀಗಾಗಿ ಅದನ್ನು ನಿಷೇಧಿಸಬೇಕು ಎಂದು ಶಿಫಾರಸು ಮಾಡಿದ್ದ ಎರಡು ದಿನಗಳ ಬಳಿಕ ಎನ್ಸಿಎಂ ತನ್ನ ನಿಲುವನ್ನು ತಿಳಿಸಿದೆ.
ಕೇರಳದ ಮಲಂಕರಾ ಆರ್ಥೋಡಾಕ್ಸ್ ಸಿರಿಯನ್ ಚರ್ಚ್ ನ ನಾಲ್ವರು ಪಾದ್ರಿಗಳು ವಿವಾಹಿತ ಮಹಿಳೆ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣ ಉದಾಹರಿಸಿ ರೇಖಾ ಶರ್ಮಾ ಈ ಶಿಫಾರಸು ಮಾಡಿದ್ದರು. ಮಹಿಳೆಯು ಚರ್ಚ್ ನಲ್ಲಿ ಕನ್ಫೇಷನ್ ಸಮಯದಲ್ಲಿ ತಾನು ಅತ್ಯಾಚಾರಕ್ಕೊಳಗಾಗಿರುವುದನ್ನು ಒಪ್ಪಿಕೊಂಡಿದ್ದಳು.
"ನಾವು ಮಹಿಳಾ ಆಯೋಗದ ಶಿಫಾರಸನ್ನು ತೀವ್ರವಾಗಿ ವಿರೋಧಿಸುತ್ತೇವೆ. ಇದನ್ನು ಎಂದೂ ಒಪ್ಪಲು ಸಾಧ್ಯವಿಲ್ಲ" ಎಂದು ಎನ್ಸಿಎಂ ಮುಖ್ಯಸ್ಥರಾದ ಎಸ್.ಗಿ. ಹಸನ್ ರಿಜ್ವಿ ಹೇಳಿದ್ದಾರೆ.
"ತಪ್ಪೊಪ್ಪಿಗೆ ಅಥವಾ ಕನ್ಫೇಷನ್ ಎನ್ನುವುದು ಕ್ರೈಸ್ತಧರ್ಮದ ಅವಿಭಾಜ್ಯ ಅಂಗವಾಗಿದ್ದು ಇದನ್ನು ನಿಷೇಧಿಸುವುದು ಅಸಾಧ್ಯ. ಧಾರ್ಮಿಕ ವಿಚಾರಗಳ ನಡುವೆ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ: ಅವರು ಹೇಳಿದ್ದಾರೆ.
ಇದಕ್ಕೂ ಮುನ್ನ ಶುಕ್ರವಾರ ಕೇಂದ್ರ ಸಚಿವರು, ಕೇರಳ ಮೂಲದ ಕ್ರೈಸ್ತ ಧರ್ಮೀಯರಾದ ಅಲ್ಫೋನ್ಸ್ ಕನ್ನಂತಾನಂ ಸಹ ಮಹಿಳಾ ಆಯೋಗದ ಶಿಪಾರಸನ್ನು ತಿರಸ್ಕರಿಸಿದ್ದರು.ಮೋದಿ ಸರ್ಕಾರವು ಜನರ ಧಾರ್ಮಿಕ ನಂಬಿಕೆಗಳಿಗೆ ಎಂದಿಗೂ ಹಸ್ತಕ್ಷೇಪ ಮಾಡುವುದಿಲ್ಲ. ಎಂದು ಅವರು ಹೇಳಿದ್ದರು.
"ಇದು ಎನ್ಸಿಡಬ್ಲ್ಯೂ ಅಧ್ಯಕ್ಷೆ ರೇಖಾ ಅವರ ವೈಯುಕ್ತಿಕ ಅಭಿಪ್ರಾಯ, ಇದು ಸರ್ಕಾರದ ನಿಲುವಲ್ಲ" ಅವರು ಫೇಸ್ ಬುಕ್ ಪೋಸ್ಟ್ ಮೂಲಕ ಸ್ಪಷ್ಟಪಡಿಸಿದ್ದಾರೆ.