ನಿಜವಾದ ಭಾರತೀಯರನ್ನು ಎನ್ಆರ್ಸಿಯಿಂದ ಕೈಬಿಡಲಾಗದು: ಅಮಿತ್ ಶಾ
ಅಸ್ಸಾಂ ನಾಗರಿಕ ರಾಷ್ಟ್ರೀಯ ನೊಂದಣಿ(ಎನ್ಆರ್ಸಿ) ಅಂತಿಮ ಕರಡು ಪಟ್ಟಿಯಿಂದ ಸುಮಾರು 40 ಲಕ್ಷ ಜನರು ಹೊರಗುಳಿದಿದ್ದು ಇದೇ ವಿಚಾರ ಇದೀಗ ರಾಷ್ಟಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ...
ನವದೆಹಲಿ: ಅಸ್ಸಾಂ ನಾಗರಿಕ ರಾಷ್ಟ್ರೀಯ ನೊಂದಣಿ(ಎನ್ಆರ್ಸಿ) ಅಂತಿಮ ಕರಡು ಪಟ್ಟಿಯಿಂದ ಸುಮಾರು 40 ಲಕ್ಷ ಜನರು ಹೊರಗುಳಿದಿದ್ದು ಇದೇ ವಿಚಾರ ಇದೀಗ ರಾಷ್ಟಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಅಸ್ಸಾಂ ನಾಗರಿಕ ರಾಷ್ಟ್ರೀಯ ನೊಂದಣಿ(ಎನ್ಆರ್ಸಿ) ಕುರಿತಂತೆ ಯಾರೂ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ನಿಜವಾದ ಭಾರತೀಯನ ಹೆಸರನ್ನು ಎನ್ಆರ್ಸಿಯಿಂದ ತೆಗೆದುಹಾಕುವುದಿಲ್ಲ ಎಂದು ಹೇಳಿದ್ದಾರೆ.
ಈ ವಿಚಾರವನ್ನು ವಿಪಕ್ಷಗಳು ತಮ್ಮ ರಾಜಕೀಯ ಬೆಳೆ ಬೆಯಿಸಿಕೊಳ್ಳಲು ಬಳಸಿಕೊಳ್ಳುತ್ತಿವೆ. ಎನ್ಆರ್ಸಿ ವಿಚಾರ ದೇಶದ ಭದ್ರತೆಗೆ ಸಂಬಂಧಪಟ್ಟಿದ್ದು ಎಲ್ಲಾದಕ್ಕಿಂತ ನಮಗೆ ದೇಶದ ಭದ್ರತೆ ಹೆಚ್ಚು ಮುಖ್ಯವಾದದ್ದು ಎಂದು ಅಮಿತ್ ಶಾ ಹೇಳಿದ್ದಾರೆ.
ದೆಹಲಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅಮಿತ್ ಶಾ ಅವರು ಎನ್ಆರ್ಸಿ ವಿಚಾರ ಕುರಿತಂತೆ ವಿಪಕ್ಷಗಳು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕಿದೆ ಎಂದು ಒತ್ತಾಯಿಸಿದರು.
ಎನ್ಆರ್ಸಿ ಬಗ್ಗೆ ಯಾವುದೇ ಭಾರತೀಯನು ಚಿಂತಿಸಬೇಕಿಲ್ಲ. ದೇಶದ ಭದ್ರತೆಗೆ ಎನ್ಆರ್ಸಿ ಪ್ರಮುಖವಾದದ್ದು. ಎನ್ಆರ್ಸಿ ಕುರಿತಂತೆ ಬಿಜೆಪಿ ನಿಲುವು ಸ್ಪಷ್ಟವಾಗಿದ್ದು ಕಾಂಗ್ರೆಸ್ ಕಾರ್ಯಗತಗೊಳಿಸಲಾಗದ್ದನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಕಾರ್ಯಗತಗೊಳಿಸಲಿದೆ ಎಂದರು.