ದೇಶ
ವಾದ್ರಾ ತೆರಿಗೆ ವಂಚನೆ ಬಗ್ಗೆ ನೀವೇನು ಹೇಳುತ್ತೀರಿ: ರಾಹುಲ್ ಗೆ ಬಿಜೆಪಿ ಪ್ರಶ್ನೆ
ಆದಾಯ ತೆರಿಗೆ ಇಲಾಖೆ ರಾಬರ್ಟ್ ವಾದ್ರಾ ಅವರಿಗೆ ನೋಟಿಸ್ ನೀಡಿರುವುದಕ್ಕೆ ಸಂಬಂಧಿಸಿದಂತೆ ಬಿಜೆಪಿ, ಕಾಂಗ್ರೆಸ್...
ನವದೆಹಲಿ: ಆದಾಯ ತೆರಿಗೆ ಇಲಾಖೆ ರಾಬರ್ಟ್ ವಾದ್ರಾ ಅವರಿಗೆ ನೋಟಿಸ್ ನೀಡಿರುವುದಕ್ಕೆ ಸಂಬಂಧಿಸಿದಂತೆ ಬಿಜೆಪಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ನಿಮ್ಮ ಭಾವ ರಾಬರ್ಟ್ ವಾದ್ರಾರ ತೆರಿಗೆ ವಂಚನೆ ಬಗ್ಗೆ ನೀವೇನು ಹೇಳುತ್ತೀರಿ ಎಂದು ಪ್ರಶ್ನಿಸಿದೆ.
ವಾದ್ರಾ ಅವರಿಗೆ ಸೇರಿದ ದೆಹಲಿಯ ಕಂಪೆನಿಯೊಂದು 25.8 ಕೋಟಿ ರು. ಆದಾಯ ತೆರಿಗೆಯನ್ನು ವಂಚಿಸಿದ ಬಗ್ಗೆ ನೀವೇನು ಹೇಳುತ್ತೀರಿ? ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರ ಅವರು ರಾಹುಲ್ ಗಾಂಧಿ ಅವರನ್ನು ಪ್ರಶ್ನಿಸಿದ್ದಾರೆ.
2010-11ರ ಹಣಕಾಸು ವರ್ಷದ ಆದಾಯ ತೆರಿಗೆಯನ್ನು ಪಾವತಿಸದೆ ಬಾಕಿ ಇರಿಸುವ ರಾಬರ್ಟ್ ವಾದ್ರಾ ಅವರ ಕಂಪೆನಿಗೆ ಐಟಿ ಇಲಾಖೆ ನೊಟೀಸ್ ಜಾರಿ ಮಾಡಿದೆ.
ಈ ಬಗ್ಗೆ ರಾಹುಲ್ ಗಾಂಧಿ ಏನು ಹೇಳ ಬಯಸುತ್ತಾರೆ ಎಂಬುದನ್ನು ನಾವು ತಿಳಿಯಬಯಸುತ್ತೇವೆ ಎಂದು ಸಂಬಿತ್ ಪಾತ್ರ ಹೇಳಿದ್ದಾರೆ.
ರಾಬರ್ಟ್ ವಾದ್ರಾ ಅವರಿಗೆ ಸೇರಿದ ದೆಹಲಿಯ ಸ್ಕೈ ಲೈಟ್ ಹಾಸ್ಪಿಟಾಲಿಟಿ 2010-11ರ ಸಾಲಿನಲ್ಲಿ ಬಾಕಿ ಇರಿಸುವ 25.8 ಕೋಟಿ ರು. ಆದಾಯ ತೆರಿಗೆಯನ್ನು ಪಾವತಿಸುವಂತೆ ಐಟಿ ಇಲಾಖೆ ನೊಟೀಸ್ ಜಾರಿ ಮಾಡಿದೆ. ಈಗ ದೇಶದ ಭ್ರಷ್ಟಾಚಾರಿಗಳು ಕಾನೂನಿನ ಬಲೆಗೆ ಬೀಳಲಿದ್ದಾರೆ ಎಂದಿದ್ದಾರೆ.
ಸಾವಿರಾರು ಕೋಟಿ ರುಪಾಯಿ ಸಾಲ ಮಾಡಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಉದ್ಯಮಿ ವಿಜಯ್ ಮಲ್ಯ ಮತ್ತು ರಾಬರ್ಟ್ ವಾದ್ರಾ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ಸಾಕಷ್ಟು ಭ್ರಷ್ಟಾಚಾರ ಎಸಗಿದ್ದಾರೆ. ಇಬ್ಬರೂ ಕಾನೂನು ಉಲ್ಲಂಘಿಸಿದ್ದಾರೆ ಎಂದು ಪಾತ್ರ ಆರೋಪಿಸಿದ್ದಾರೆ.