ನವದೆಹಲಿ: ತಮ್ಮ ತಂದೆಯನ್ನು ಕೊಂದವರನ್ನು ಕ್ಷಮಿಸಿದ್ದೇವೆ ಎಂಬ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿಕೆ, ರಾಜೀವ್ ಗಾಂಧಿಯವರನ್ನು ಹಣಕಾಸಿನ ಲಾಭಕ್ಕಾಗಿ ಕೊಲೆ ಮಾಡಿರುವ ಅಥವಾ ಸುಪಾರಿ ಕೊಲೆ ಮಾಡಿರುವ ಸಂಶಯವನ್ನು ಹುಟ್ಟುಹಾಕುತ್ತದೆ ಎಂದು ಭಾರತೀಯ ಜನತಾ ಪಾರ್ಟಿಯ ನಾಯಕ ಸುಬ್ರಹ್ಮಣ್ಯ ಸ್ವಾಮಿ ಹೇಳಿದ್ದಾರೆ.
ಎಎನ್ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು, ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಹತ್ಯೆ ಕುರಿತು ತನಿಖೆ ನಡೆಸಬೇಕೆಂದು ಅವರು ಒತ್ತಾಯಿಸಿದ್ದಾರೆ.
ಭಾರತೀಯ ಸೇನೆಯನ್ನು ಶ್ರೀಲಂಕಾಕ್ಕೆ ಎಲ್ ಟಿಟಿಇ ವಿರುದ್ಧ ಹೋರಾಡಲು ಕಳುಹಿಸಿದ್ದಕ್ಕಾಗಿ ರಾಜೀವ್ ಗಾಂಧಿಯವರನ್ನು ಹತ್ಯೆ ಮಾಡಲಾಯಿತು ಎಂದು ಎಲ್ ಟಿಟಿಇ ಹೇಳಿದೆ. ಎಲ್ ಟಿಟಿಇ ವಿರುದ್ಧ ಹೋರಾಡಲು ಶ್ರೀಲಂಕಾ ಸರ್ಕಾರ ಭಾರತ ಸೇನೆಯ ಸಹಾಯ ಕೇಳಿದ್ದಕ್ಕೆ ಸಂಸತ್ತಿನ ಒಪ್ಪಿಗೆ ಪಡೆದೇ ರಾಜೀವ್ ಗಾಂಧಿಯವರು ಸೇನೆಯನ್ನು ಕಳುಹಿಸಿದ್ದರು. ಹೀಗಿರುವಾಗ ಅವರನ್ನು ಹತ್ಯೆ ಮಾಡಲು ಅದೊಂದೇ ಕಾರಣವಾಗಿರಲಿಕ್ಕಿಲ್ಲ ಎಂದು ಸುಬ್ರಹ್ಮಣ್ಯ ಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.
ಇದೇ ಸಂದರ್ಭದಲ್ಲಿ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ಮುಂದುವರಿಸಿದ ಅವರು, ತಮ್ಮ ತಂದೆಯನ್ನು ಹತ್ಯೆ ಮಾಡಿದವರನ್ನು ಕ್ಷಮಿಸಿದ್ದೇವೆ ಎನ್ನುವ ರಾಹುಲ್ ಗಾಂಧಿಯವರ ಹೇಳಿಕೆ ಅವರಲ್ಲಿ ದೇಶಭಕ್ತಿಯ ಕೊರತೆಯನ್ನು ಮತ್ತು ಕಾನೂನುಬದ್ಧತೆಯನ್ನು ಪ್ರಶ್ನಿಸುವಂತೆ ಮಾಡಿದೆ ಎಂದರು.
Advertisement