ಲಕ್ನೋ: ವಿದ್ಯುನ್ಮಾನ ಮತಯಂತ್ರ ಲೋಪದೋಷವಿಲ್ಲದಿರುತ್ತಿದ್ದರೆ ಗೋರಖ್ ಪುರ ಮತ್ತು ಫುಲ್ಪುರ್ ಲೋಕಸಭೆ ಉಪ ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗೆ ಇನ್ನೂ ಹೆಚ್ಚಿನ ಮತಗಳು ಸಿಗುತ್ತಿದ್ದವು ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ತಿಳಿಸಿದ್ದಾರೆ.
ಬ್ಯಾಲಟ್ ಪೇಪರ್ ವ್ಯವಸ್ಥೆಯೇ ಮತದಾನಕ್ಕೆ ಉತ್ತಮ ಸಾಧನವಾಗಿದ್ದು, ತಮ್ಮ ಸಿಟ್ಟನ್ನು ಜನರು ತೋರಿಸಿಕೊಳ್ಳಲು ಇದು ಸಹಾಯವಾಗುತ್ತಿತ್ತು ಎಂದಿದ್ದಾರೆ.
ಎಲೆಕ್ಟ್ರಾನಿಕ್ ಮತಯಂತ್ರಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿದ್ದರೆ ಮತ್ತು ಮತದಾನ ಪ್ರಕ್ರಿಯೆಯಲ್ಲಿ ಸಮಯ ಹಾಳಾಗದಿರುತ್ತಿದ್ದರೆ ಸಮಾಜವಾದಿ ಪಕ್ಷದ ಅಭ್ಯರ್ಥಿಗೆ ಇನ್ನಷ್ಟು ಮತಗಳು ಲಭಿಸುತ್ತಿದ್ದವು. ಹಲವು ವಿದ್ಯುನ್ಮಾನ ಮತ ಯಂತ್ರಗಳಲ್ಲಿ ಮತದಾನ ಆರಂಭವಾಗುವುದಕ್ಕೆ ಮೊದಲೇ ಮತಗಳನ್ನು ಚಲಾಯಿಸಲಾಗಿರುತ್ತದೆ ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.
ಉತ್ತರ ಪ್ರದೇಶ ಲೋಕಸಭೆ ಉಪ ಚುನಾವಣೆಯಲ್ಲಿ ಗೆದ್ದ ಸಮಾಜವಾದಿ ಅಭ್ಯರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ ಅಖಿಲೇಶ್ ಯಾದವ್, ಇವಿಎಂಗಳಲ್ಲಿನ ಲೋಪದೋಷಗಳ ಕುರಿತು ಸಮಾಜವಾದಿ ಪಕ್ಷ ದೂರು ಸಲ್ಲಿಸಿತ್ತು. ಚುನಾವಣಾ ಆಯೋಗ ಅದನ್ನು ಪರಿಗಣಿಸಬೇಕಾಗಿತ್ತು. ಇವಿಎಂಗಳ ಮೂಲಕ ಜನರ ಸಿಟ್ಟು, ನೋವು, ಹತಾಶೆಗಳೆಲ್ಲವೂ ಹೊರಬರುವುದಿಲ್ಲ. ಬ್ಯಾಲಟ್ ಪೇಪರ್ ಬಳಸಿದರೆ ಚುನಾವಣೆ ಫಲಿತಾಂಶ ಇನ್ನಷ್ಟು ಸ್ಪಷ್ಟವಾಗಿ ಬರುತ್ತದೆ ಎಂದು ಹೇಳಿದರು.
Advertisement