ಅಮರಾವತಿ: ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರು ಗುರುವಾರ ಮತ್ತೆ ದೊಡ್ಡ ಮೌಲ್ಯದ ನೋಟುಗಳನ್ನು ನಿಷೇಧಿಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಈ ಹಿಂದೆ 500 ಹಾಗೂ 1000 ರುಪಾಯಿ ನೋಟ್ ಗಳನ್ನು ನಿಷೇಧಿಸುವತೆ ಒತ್ತಾಯಿಸಿದ್ದ ಆಂಧ್ರ ಸಿಎಂ ಈಗ ಮತ್ತೆ 2000 ಹಾಗೂ 500 ರುಪಾಯಿ ನೋಟ್ ಗಳನ್ನು ನಿಷೇಧಿಸಬೇಕು ಎಂದಿದ್ದಾರೆ. ಅಲ್ಲದೆ ದೊಡ್ಡ ಮೌಲ್ಯದ ನೋಟ್ ಗಳನ್ನು ನಿಷೇಧಿಸುವುದರಿಂದ ಭ್ರಷ್ಟಾಚಾರ ಮತ್ತು ಚುನಾವಣೆಯಲ್ಲಿ ಹಣಬಲಕ್ಕೆ ಕಡಿವಾಣ ಹಾಕಬಹುದು ಎಂದು ಹೇಳಿದ್ದಾರೆ.
ಇಂದು ವಿಧಾನಸಭೆಯಲ್ಲಿ ಮಾತನಾಡಿದ ಆಂಧ್ರ ಸಿಎಂ, ಕೇಂದ್ರ ಸರ್ಕಾರ ಈ ಕೂಡಲೇ 2000 ಮತ್ತು 500 ರುಪಾಯಿ ನೋಟುಗಳನ್ನು ಹಿಂಪಡೆಯಬೇಕು ಮತ್ತು ಆನ್ ಲೈನ್ ವ್ಯವಹಾರಕ್ಕೆ ಹೆಚ್ಚು ಪ್ರೋತ್ಸಾಹ ನೀಡಬೇಕು ಎಂದು ಹೇಳಿದ್ದಾರೆ.
ಈ ಹಿಂದೆ 500 ಹಾಗೂ 1000 ರುಪಾಯಿ ನೋಟ್ ಗಳನ್ನು ರದ್ದು ಮಾಡಬೇಕು ಎಂದು ಒತ್ತಾಯಿಸಿದ ಮೊದಲ ರಾಜಕಾರಣಿ ತಾವೇ ಎಂದು ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ತಿಳಿಸಿದರು.