ನವದೆಹಲಿ: ದೆಹಲಿಯ ರಾಮ್ ಲೀಲಾ ಮೈದಾನದಲ್ಲಿ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಉಪವಾಸ ಸತ್ಯಾಗ್ರಹದಲ್ಲಿ ತೊಡಗಿದ್ದು ಇವರ ಹೋರಾಟದ ಸಂಬಂಧ ಕೇಂದ್ರ ಸರ್ಕಾರ ನಿರ್ಲಕ್ಷ ತಾಳಿದೆ ಎಂದು ಆರೋಪಿಸಿ ಅಣ್ಣಾ ಹಜಾರೆ ಹುಟ್ಟೂರಾದ ರಾಲೆಗನ್ ಸಿದ್ಧಿಯ ಜನರು ಹೋರಾಟಕ್ಕಿಳಿದಿದ್ದಾರೆ.
ರಾಲೆಗನ್ ಸಿದ್ಧಿಯ ಗ್ರಾಮಸ್ಥರು ಮಹಾರಾಷ್ಟ್ರದ ಅಹಮದ್ ನಗರ ಜಿಲ್ಲೆಯ ಬಿಜೆಪಿ ಸಂಸದ ದಿಲೀಪ್ ಗಾಂಧಿ ಮನೆ ಮುಂದೆ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದ್ದಾರೆ. "ನಮ್ಮ ಹಳ್ಳಿ ನಮ್ಮ ಸರ್ಕಾರ" ಎನ್ನುವ ಘೋಷಣೆಗಳನ್ನು ಕೂಗುತ್ತಾ ಗ್ರಾಮಸ್ಥರು ಹೋರಾಟ ನಡೆಸಿದ್ದಾರೆ.
ಇದೇ ವೇಳೆ ಗ್ರಾಮಸ್ಥರು ಗ್ರಾಮದಲ್ಲಿ ಸರ್ಕಾರಿ ಅಧಿಕಾರಿಗಳನ್ನು ನಿಷೇಧಿಸಬೇಕೆಂದು ಗ್ರಾಮಸಭೆಯಲ್ಲಿ ನಿರ್ಣಯ ಅಂಗೀಕರಿಸಿದ್ದಾರೆ. ಹಳ್ಳಿಯ ಪೋಲೀಸ್ ಅಧಿಕಾರಿಗಳು, ಜಿಲ್ಲಾ ಆಡಳಿತಾಧಿಕಾರಿಗಳು ಹಳ್ಳಿಯನ್ನು ತೊರೆದು ಹೋಗುವಂತೆ ಗ್ರಾಮಸ್ಥರು ಕೇಳಿದ್ದಾರೆ.
ಬಿಜೆಪಿ ಸರ್ಕಾರ ರಾಮ್ ಲೀಲಾ ಮೈದಾನದಲ್ಲಿ ಕಮಾಂಡೋಗಳನ್ನು ನಿಯೋಜಿಸಿದೆ. ಆದರೆ ಗಡಿಯಲ್ಲಿ ನಮ್ಮ ಸೈನಿಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂದು ಗ್ರಾಮದ ಮಾಜಿ ಸರ್ಪಂಚ್ ಓರ್ವರು ಹೇಳಿದರು. ಇಂದು ರಾತ್ರಿಯೊಳಗೆ ಸರ್ಕಾರವು ಸೂಕ್ತ ಪರಿಹಾರ ಕ್ರಮ ತೆಗೆದುಕೊಳ್ಳದೆ ಹೋದಲ್ಲಿ ಗುರುವಾರ ಮುಂಜಾನೆ ನೂರಾರು ಗ್ರಾಮಸ್ಥರು ಆತ್ಮಹತ್ಯೆಗೆ ಶರಣಾಗಲಿದ್ದಾರೆ ಎಂದು ಅವರು ಹೇಳಿದ್ದಾರೆ.
ರಾಮ್ ಲೀಲಾ ಮೈದಾನದಲ್ಲಿ ಅಣ್ಣಾ ಹಜಾರೆ ಅವರ ಉಪವಾಸ ಸತ್ಯಾಗ್ರಹ ಏಳನೇ ದಿನಕ್ಕೆ ಕಾಲಿಟ್ಟಿದೆ. ಈ ನಡುವೆ ಸ್ವಗ್ರಾಮದಲ್ಲಿ ಗ್ರಾಮಸ್ಥರು ಹಾಗೂ ಸರ್ಕಾರಿ ಅಧಿಕಾರಿಗಳ ನಡುವೆ ತಿಕ್ಕಾಟ ಹುಟ್ಟಿಕೊಂಡಿದೆ. ಇದು ಮುಂಬರುವ ದಿನಗಳಲ್ಲಿ ಇನ್ನಷ್ಟು ವಿಕೋಪಕ್ಕೆ ಹೋಗುವ ಸಾದ್ಯತೆ ಇದೆ.