ಸುಪ್ರೀಂ ಕೋರ್ಟ್ ಕೊಲಿಜಿಯಂನ ಶಿಫಾರಸಿನ ಸಂಬಂಧ ಕರ್ನಾಟಕ ಹೈಕೋರ್ಟ್ಗೆ ಕೇಂದ್ರ ಕಾನೂನು ಸಚಿವಾಲಯದಿಂದ ನೇರವಾಗಿ ಸಂಪರ್ಕಿಸಿದ ವಿಚಾರವನ್ನು ಪ್ರಸ್ತಾಪಿಸಿದ ನ್ಯಾ. ಚಲಮೇಶ್ವರ್ ಅವರು, ನ್ಯಾಯಾಂಗ ಅಧಿಕಾರಿಯನ್ನು ಹೈಕೋರ್ಟ್ ನ್ಯಾಯಾಧೀಶರಾಗಿ ಆಗಿ ನೇಮಕ ಮಾಡಬೇಕಿತ್ತು. ಅಥವಾ ಆ ವಿಚಾರದಲ್ಲಿ ಭಿನ್ನಾಭಿಪ್ರಾಯವಿದ್ದಿದ್ದರೆ ಕೊಲಿಜಿಯಂಗೆ ವಾಪಸ್ ತಿಳಿಸಬಹುದಾಗಿತ್ತು. ಅದು ಬಿಟ್ಟು ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ನೇರವಾಗಿ ಪತ್ರ ಬರೆದು ಆ ನ್ಯಾಯಾಂಗ ಅಧಿಕಾರಿಯ ವಿರುದ್ಧ ಮರುತನಿಖೆ ನಡೆಸಬೇಕೆಂದು ಸೂಚಿಸುತ್ತಾರೆ. ಇದಕ್ಕೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಸಮ್ಮತಿಸುತ್ತಾರೆ. ಈ ಬೆಳವಣಿಗೆಯು ಹಿಂದಿನ ತನಿಖೆಯ ವರದಿಗೆ ತದ್ವಿರುದ್ಧವಾದಂತಾಗಿದೆ. ಅಷ್ಟೇ ಅಲ್ಲ, ಕೊಲಿಜಿಯಿಂನ ಶಿಫಾರಸಿಗೂ ತಡೆ ಬಿದ್ದಂತಾಗಿದೆ. ಹಿಂದಿನ ತನಿಖೆಯಲ್ಲಿ ಆ ಅಧಿಕಾರಿಗೆ ಕ್ಲೀನ್ ಚಿಟ್ ಕೊಡಲಾಗಿತ್ತು. ಅದನ್ನು ಬದಿಗೊತ್ತಿ, ಆ ಅಧಿಕಾರಿ ವಿರುದ್ಧ ಮರುತನಿಖೆಗೆ ಸೂಚಿಸಿದ್ದು ನ್ಯಾಯಾಂಗ ವ್ಯವಸ್ಥೆಯಲ್ಲಿ ಸರ್ಕಾರದ ಹಸ್ತಕ್ಷೇಪವಾದಂತಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.