ರಾಂಚಿ: ಬಹುಕೋಟಿ ಮೇವು ಹಗರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಬಿಹಾರದ ಮಾಜಿ ಮುಖ್ಯಮಂತ್ರಿ ಹಾಗೂ ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರಿಗೆ ಜಾರ್ಖಂಡ್ ಹೈಕೋರ್ಟ್ ಶುಕ್ರವಾರ ಆರು ವಾರಗಳ ಕಾಲ ತಾತ್ಕಾಲಿಕ ಜಾಮೀನು ಮಂಜೂರು ಮಾಡಿದೆ.
ಪುತ್ರ ತೇಜ್ ಪ್ರತಾಪ್ ಯಾದವ್ ಮದುವೆಯಲ್ಲಿ ಭಾಗವಹಿಸುವುದಕ್ಕಾಗಿ ಈಗಾಗಲೇ ಮೂರು ದಿನಗಳ ಕಾಲ ಪೆರೋಲ್ ಪಡೆದಿದ್ದು, ಈಗ ಅನಾರೋಗ್ಯದ ಹಿನ್ನೆಲೆಯಲ್ಲಿ ತಾತ್ಕಾಲಿಕ ಜಾಮೀನು ಪಡೆದಿದ್ದಾರೆ.
ಲಾಲು ಪುತ್ರ ಹಾಗೂ ಹಾಲಿ ಆರ್ ಜೆಡಿ ಶಾಸಕ ತೇಜ್ ಪ್ರತಾಪ್ ಅವರು ಮೇ 12ರಂದು ಆರ್ ಜೆಡಿ ಶಾಸಕಿ ಚಂದ್ರಿಕಾ ರೈ ಅವರ ಪುತ್ರಿ ಐಶ್ವರ್ಯ ರೈ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು, ಈ ಶುಭ ಗಳಿಗೆಯಲ್ಲಿ ಭಾಗವಹಿಸುವುದಕ್ಕಾಗಿ ಲಾಲು ಪ್ರಸಾದ್ ಯಾದವ್ ಅವರು ಪೆರೋಲ್ ಪಡೆದಿದ್ದಾರೆ.
ಮೇವು ಹಗರಣಕ್ಕೆ ಸಂಬಂಧಿಸಿದ ಮೂರು ಪ್ರಕರಣಗಳಲ್ಲಿ ಲಾಲು ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ.
ಬಿರ್ಸಾ ಮುಂಡ ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ಲಾಲು ಅವರನ್ನು ಅನಾರೋಗ್ಯದ ಕಾರಣ ಏಮ್ಸ್ ಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ರಾಂಚಿಯ ಆರ್ಐಎಂಎಸ್ ಗೆ ದಾಖಲಿಸಲಾಗಿತ್ತು. ಅನಾರೋಗ್ಯದ ಕಾರಣ ಏ.18ರಂದು ತೇಜ್ ಪ್ರತಾಪ್ ಅವರ ನಿಶ್ಚಿತಾರ್ಥ ಸಮಾರಂಭದಲ್ಲಿ ಲಾಲು ಪಾಲ್ಗೊಂಡಿರಲಿಲ್ಲ.