ನನ್ನ ದೇಹದಲ್ಲಿ ರಕ್ತ ಹರಿಯುವವರೆಗೂ ರಾಹುಲ್ ಗಾಂಧಿ ಪರವಾಗಿ ಇರುತ್ತೇನೆ: ನವಜೋತ್ ಸಿಂಗ್ ಸಿಧು

ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕೂಡ ಕಾಂಗ್ರೆಸ್ ಹೀನಾಯ ಸೋಲು ಅನುಭವಿಸುತ್ತಿದ್ದರೂ ...
ರಾಹುಲ್ ಗಾಂಧಿ-ನವಜೋತ್ ಸಿಂಗ್ ಸಿಧು
ರಾಹುಲ್ ಗಾಂಧಿ-ನವಜೋತ್ ಸಿಂಗ್ ಸಿಧು

ನವದೆಹಲಿ: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕೂಡ ಕಾಂಗ್ರೆಸ್ ಹೀನಾಯ ಸೋಲು ಅನುಭವಿಸುತ್ತಿದ್ದರೂ ಕೂಡ ಪಕ್ಷದ ನಾಯಕರು ಸೋಲಿಗೆ ಕಾರಣವನ್ನು ಪರಾಮರ್ಶಿಸುವ ಬದಲು ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿಯವರ ಪರ ಮಾತನಾಡುತ್ತಿದ್ದಾರೆ.

ಪಕ್ಷದ ಕಾರ್ಯಕರ್ತರಲ್ಲಿ ಪ್ರಿಯಾಂಕಾ ಗಾಂಧಿಯನ್ನು ಕರೆತನ್ನಿ ಎಂಬ ಕೂಗಾಟ, ಒತ್ತಾಯ ಹೆಚ್ಚಾಗಿ ಕೇಳಿಬರುತ್ತಿದ್ದರೆ ಪಂಜಾಬ್ ಸಚಿವ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಮಾತ್ರ ಪಕ್ಷವನ್ನು ಮುನ್ನಡೆಸಲು ರಾಹುಲ್ ಗಾಂಧಿಯೇ ಸರಿಯಾದ ವ್ಯಕ್ತಿ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಉಪಾಧ್ಯಕ್ಷರಾಗಿದ್ದಾಗ ಮೇಲಿಂದ ಮೇಲೆ ಹಲವು ರಾಜ್ಯಗಳಲ್ಲಿ ಸೋಲನುಭವಿಸಿದ್ದು ಅಧ್ಯಕ್ಷರಾಗಿ ರಾಹುಲ್ ಗಾಂಧಿ ಅಧಿಕಾರ ವಹಿಸಿಕೊಂಡ ಮೇಲೆ ಇದು ಮೂರನೇ ರಾಜ್ಯದಲ್ಲಿ ಚುನಾವಣೆಯಲ್ಲಿ ಸೋಲನುಭವಿಸುತ್ತಿರುವುದು. ಆದರೂ ಕೂಡ ಸಿಧು, ಭವಿಷ್ಯ ಉಜ್ವಲವಾಗಿದೆ ಎನ್ನುತ್ತಿದ್ದಾರೆ.

ವಂಶಪಾರಂಪರ್ಯವಾಗಿ ರಾಹುಲ್ ಭಾಯಿ ಕಾಂಗ್ರೆಸ್ ನ ನಾಯಕರಾಗಿದ್ದಾರೆ. 2019ರ ಲೋಕಸಭೆ ಚುನಾವಣೆ ಫಲಿತಾಂಶ ವಿಭಿನ್ನವಾಗಿರಲಿದೆ. ಮೈತ್ರಿಕೂಟಗಳು ಅವರ ಜೊತೆಗಿವೆ ಎಂದು ಹೇಳಿದ್ದಾರೆ. ಅವರು ಇಂದು ರಸ್ತೆ ದಾಂಧಲೆ ಕೇಸಿನಿಂದ ಮುಕ್ತಿ ಹೊಂದಿದ್ದಾರೆ.

ತಾವು ಸದಾ ರಾಹುಲ್ ಗಾಂಧಿಯವರ ಬೆಂಬಲಕ್ಕೆ ಇರುತ್ತೇನೆ. ನನ್ನ ದೇಹದೊಳಗೆ ರಕ್ತ ಹರಿದಾಡುವವರೆಗೆ ರಾಹುಲ್ ಗಾಂಧಿಯವರ ಜೊತೆಗೆ ಇರುತ್ತೇನೆ ಎಂದಿದ್ದಾರೆ. ನನ್ನನ್ನು ಈ ಕೇಸಿನಿಂದ ಖುಲಾಸೆ ಮಾಡುವಲ್ಲಿ ಪಂಜಾಬ್ ಜನರ ಪ್ರೀತಿ, ಹಾರೈಕೆಗಳು ಮುಖ್ಯವಾಗಿವೆ. ಅವರಿಗೆ ಧನ್ಯವಾದ ಹೇಳುತ್ತೇನೆ ಎಂದು ಸಿಧು ಹೇಳಿದ್ದಾರೆ.

ಇದಕ್ಕೂ ಮುನ್ನ ಕರ್ನಾಟಕದ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಕೂಡ ಕಾಂಗ್ರೆಸ್ ಸೋಲಿಗೆ ರಾಹುಲ್ ಗಾಂಧಿಯವರು ಕಾರಣವಲ್ಲ. ಅವರು ಅವರ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಿದ್ದಾರೆ. ನಾವೇ ಸ್ಥಳೀಯ ಮುಖಂಡರು ಅವಕಾಶವನ್ನು ಸರಿಯಾಗಿ ಬಳಸಿಕೊಂಡಿಲ್ಲ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com