
ನವದೆಹಲಿ : ಕೇರಳದಲ್ಲಿ ನಿಫಾಹ್ ವೈರಾಣು ಸೋಂಕುವಿನಿಂದಾಗಿ 10 ಮಂದಿ ಸಾವನ್ನಪ್ಪಿದ್ದು, ಇದರ ನಿಯಂತ್ರಣಕ್ಕಾಗಿ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜನರು ವದಂತಿಗಳಿಗೆ ಕಿವಿಗೊಡದಂತೆ ಕೇಂದ್ರ ಆರೋಗ್ಯ ಸಚಿವ ಜೆ. ಪಿ. ನಡ್ಡಾ ಮನವಿ ಮಾಡಿಕೊಂಡಿದ್ದಾರೆ.
ಕೇರಳದಲ್ಲಿಯೇ ಏಕಾಏಕಿ ನಿಫಾಹ್ ವೈರಾಣು ಕಾಣಿಸಿಕೊಂಡಿರುವುದನ್ನು ಕೇಂದ್ರ ಆರೋಗ್ಯ ಸಚಿವಾಲಯ ಸ್ಥಳೀಯ ಘಟನೆ ಎಂಬಂತೆ ಗಮನ ಕೇಂದ್ರಿಕರಿಸಿದ್ದು, ಸದ್ಯ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ ಎಂದು ನಡ್ಡಾ ಹೇಳಿದ್ದಾರೆ.
ಕೇಂದ್ರ ಆರೋಗ್ಯ ಕಾರ್ಯದರ್ಶಿ ಪ್ರೀತಿ ಸುದನ್ ಮತ್ತು ಐಸಿಎಂಆರ್ ಮಹಾನಿರ್ದೇಶಕ ಡಾ. ಬಲರಾಮ್ ಭಾರ್ಗವ ಅವರೊಂದಿಗೆ ಕೇರಳ ಪರಿಸ್ಥಿತಿ ಪರಾಮರ್ಶೆ ನಡೆಸಿದ ಕೇಂದ್ರ ಸಚಿವರು, ಕೇರಳ ಸರ್ಕಾರಕ್ಕೆ ಅಗತ್ಯ ಎಲ್ಲಾ ನೆರವು ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿರುವುದಾಗಿ ತಿಳಿಸಿದ್ದಾರೆ.
ನಿಫಾಹ್ ವೈರಾಣು ಸೋಂಕುವಿನಿಂದಾಗಿ 9 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಕೊಝೀಕೊಡುವಿನ ಅನೇಕ ಆಸ್ಪತ್ರೆಗಳಲ್ಲಿ ಪ್ರತ್ಯೇಕ ವಾರ್ಡ್ ಗಳನ್ನು ತೆರೆಯಲಾಗಿದೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದ್ದು, ಕೇರಳದಲ್ಲಿನ ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರಕ್ಕೆ ಬಹು ಹಂತದ ಕೇಂದ್ರೀಯ ತಂಡ ಆಗಮಿಸಿದ್ದು, ನಿರಂತರವಾಗಿ ಪರಿಸ್ಥಿತಿಯ ಪರಾಮರ್ಶೆ ನಡೆಸುತ್ತಿದೆ.
ಸೋಂಕುವಿನಿಂದ ಮೃತಪಟ್ಟಿದ್ದ ಪೆರಮ್ ಬ್ರಾದ ಮನೆಯೊಂದಕ್ಕೆ ತಜ್ಞರ ತಂಡ ಭೇಟಿ ನೀಡಿದ್ದು,ಕುಟುಂಬವು ನೀರಿಗಾಗಿ ಬಳಸುತ್ತಿದ್ದ ಬಾವಿಗಳಲ್ಲಿ ಅನೇಕ ಬಾವಲಿಗಳು ಕಂಡುಬಂದಿವೆ. ಕೆಲ ಬಾವಲಿಗಳನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸ್ಥಳದಿಂದ 60 ವಿವಿಧ ಪ್ರಕಾರದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಎರಡು ಪ್ರಕರಣಗಳಲ್ಲಿ ಇದರಿಂದಾಗಿಯೇ ಸಾವನ್ನಪ್ಪಿರುವುದು ದೃಢಪಟ್ಟಿದೆ. ನಿಫಾಹ್ ವೈರಾಣು ಹಿನ್ನೆಲೆಯಲ್ಲಿ ಕೆಲವರನ್ನು ಕ್ಯಾಲಿಕಟ್ ವೈದ್ಯಕೀಯ ಕಾಲೇಜ್ ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸಚಿವಾಲಯದ ಮಾಹಿತಿ ನೀಡಿದೆ.
ತುರ್ತು ನಿರ್ವಹಣೆಗಾಗಿ ಎನ್ ಸಿಡಿಸಿಯ ಸಂಚಾರಿ ಸಾರ್ವಜನಿಕರ ಆರೋಗ್ಯ ತಂಡವನ್ನು ಕೋಝಿಕೊಡುವಿನ ಶಾಖೆಗಳಲ್ಲಿ ಕೇಂದ್ರ ಆರೋಗ್ಯ ಸಚಿವಾಲಯ ನಿಯೋಜಿಸಿದೆ.
Advertisement