ಲಖನೌ: ತನಗೆ ನೀಡಿದ್ದ ಸರ್ಕಾರಿ ಬಂಗಲೆಯನ್ನು ಬಹುಜನ ಸಮಾಜವಾದಿ ಪಕ್ಷ(ಬಿಎಸ್ಪಿ)ದ ಸಂಸ್ಥಾಪಕ ಕಾನ್ಶಿರಾಮ್ ಅವರ ಸ್ಮಾರಕವಾಗಿ ಪರಿವರ್ತಿಸಲಾಗಿದೆ. ಹೀಗಾಗಿ ತಾವು ಬಂಗಲೆ ಖಾಲಿ ಮಾಡುವುದಿಲ್ಲ ಎಂದು ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ ಅವರು ಹೇಳಿದ್ದಾರೆ.
ಸರ್ಕಾರಿ ಬಂಗಲೆ ಖಾಲಿ ಮಾಡುವಂತೆ ಉತ್ತರ ಪ್ರದೇಶ ಸರ್ಕಾರ ನೀಡಿದ್ದ ನೋಟಿಸ್ ಗೆ ಮಾಯಾವತಿ ಅವರು ಈ ರೀತಿ ಉತ್ತರ ನೀಡಿದ್ದಾರೆ.
ಈ ಸಂಬಂಧ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಮಾಯಾವತಿ ಪತ್ರ ಬರೆದಿದ್ದು, ತಾವು ವಾಸಿಸುತ್ತಿರುವ 13ಎ, ಮಾಲ್ ಅವೆನ್ಯೂ ಅಧಿಕೃತ ಬಂಗಲೆಯನ್ನು 2011ರಲ್ಲೇ ಕಾನ್ಶಿರಾಮ್ ಅವರ ಸ್ಮಾರಕ ಎಂದು ಘೋಷಿಸಿರುವುದಾಗಿ ತಿಳಿಸಿದ್ದಾರೆ.
ಬಂಗಲೆಯ ಕೆಲ ಭಾಗದಲ್ಲಿ ವಾಸಿಸಲು ತಮಗೆ ಅವಕಾಶ ನೀಡಲಾಗಿದ್ದು, ಕೇವಲ ಎರಡು ರೂಮ್ ಗಳಲ್ಲಿ ಮಾತ್ರ ತಾವು ವಾಸಿಸುತ್ತಿರುವುದಾಗಿ ಪತ್ರದಲ್ಲಿ ತಿಳಿಸಿದ್ದಾರೆ.
ಡಿಸೆಂಬರ್ 23, 2011ರಲ್ಲಿ ಎಸ್ಟೇಟ್ ಇಲಾಖೆ ಲಾಲ್ ಬಹದ್ದೂರ್ ಶಾಸ್ತ್ರಿ ಮಾರ್ಗದಲ್ಲಿ ತಮಗೆ ಹಂಚಿಕೆ ಮಾಡಿದ್ದ ಮನೆಯನ್ನು ಶೀಘ್ರದಲ್ಲೇ ಇಲಾಖೆಗೆ ಹಸ್ತಾಂತರಿಸುವುದಾಗಿ ಮಾಯಾವತಿ ಪತ್ರದಲ್ಲಿ ಹೇಳಿದ್ದಾರೆ.