ಕೊಝಿಕೋಡ್: ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ಯೋಜಿತ ಮತ್ತು ನಮ್ಮ ಪಕ್ಷದ ಅಜೆಂಡಾದ ಭಾಗವಾಗಿ ಆಯೋಜಿಸಲಾಗಿತ್ತು ಎಂದು ಕೇರಳ ಬಿಜೆಪಿ ಸೋಮವಾರ ಒಪ್ಪಿಕೊಂಡಿದೆ.
ಕೇರಳ ಬಿಜೆಪಿ ಅಧ್ಯಕ್ಷ ಶ್ರೀಧರನ್ ಪಿಳ್ಳೈ ಅವರು ಯುವ ಮೋರ್ಚಾ ಸಭೆಯಲ್ಲಿ ಮಾತನಾಡಿದ ಆಡಿಯೋ ಈಗ ಬಹಿರಂಗವಾಗಿದ್ದು, 10ರಿಂದ 50 ವರ್ಷದ ಮಹಿಳೆಯರು ಅಯ್ಯಪ್ಪ,ಸ್ವಾಮಿ ದೇವಸ್ಥಾನ ಪ್ರವೇಶಿಸದಂತೆ ತಡೆಯುವ ಬಗ್ಗೆ ದೇಗುಲದ ತಂತ್ರಿ ನನ್ನೊಂದಿಗೆ ಚರ್ಚಿಸಿದ್ದರು ಎಂದು ಹೇಳಿಕೊಂಡಿದ್ದಾರೆ.
ಅಕ್ಟೋಬರ್ 17ರಿಂದ ಅಕ್ಟೋಬರ್ 22ರ ವರೆಗೆ ನಡೆದ ಪ್ರತಿಭಟನೆ ಯೋಜಿತ ಮತ್ತು ಅದನ್ನು ಕಾರ್ಯರೂಪಕ್ಕೆ ತಂದಿದ್ದು ಬಿಜೆಪಿ. ಈ ಸಂಬಂಧ ನಾವು ಒಂದು ಅಜೆಂಡಾವನ್ನು ಮಂಡಿಸಿದ್ದೇವು. ಅದನ್ನು ನಮ್ಮ ಕಾರ್ಯಕರ್ತರು ಒಪ್ಪಿಕೊಂಡರು ಎಂದು ಪಿಳೈ ಹೇಳಿದ್ದಾರೆ.
ನಿರ್ಧಿಷ್ಟ ಸ್ಥಳಗಳಲ್ಲಿ ಕ್ಯಾಂಪ್ ಮಾಡಲು ಇಬ್ಬರು ರಾಜ್ಯ ಪ್ರಧಾನ ಕಾರ್ಯದರ್ಶಿಗಳನ್ನು ನಿಯೋಜಿಸಲಾಗಿತ್ತು ಮತ್ತು ಅವರು ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಜಿಲ್ಲಾ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಮಹಿಳೆಯರು ದೇವಾಲಯ ಪ್ರವೇಶಿಸುವ ಯತ್ನವನ್ನು ವಿಫಲಗೊಳಿಸಿದರು ಶ್ರೀಧರನ್ ಪಿಳ್ಳೈ ತಿಳಿಸಿದ್ದಾರೆ.
ದೇವಾಲಯದ ಮುಖ್ಯ ಅರ್ಚಕ ಕಾಂತರಾರು ರಾಜೀವರು ನನಗೆ ಫೋನ್ ಮಾಡಿ, ಮಹಿಳೆಯರು ದೇವಸ್ಥಾನ ಪ್ರವೇಶಿಸಲು ಸಿದ್ಧರಾಗಿದ್ದಾರೆ. ಅವರಿಗೆ ಪ್ರವೇಶ ನಿರಾಕರಿಸಿದರೆ ನ್ಯಾಯಾಂಗ ನಿಂದನೆಯಾಗುತ್ತದೆ ಎಂದರು. ನಾವು ನಿಮ್ಮೊಂದಿಗೆ ಇದ್ದೇವೆ ಎಂದು ನಾನು ಅವರಿಗೆ ಭರವಸೆ ಕೊಟ್ಟೆ ಎಂದಿದ್ದಾರೆ.