ಜಮ್ಮು-ಕಾಶ್ಮೀರ: ಅಂತಾರಾಷ್ಟ್ರೀಯ ಗಡಿ ನಿಯಂತ್ರಣ ರೇಖೆ ಬಳಿ ಭಾರತದೊಳಗೆ ನುಸುಳಲು ಸುಮಾರು 160 ಉಗ್ರರು ಕಾಯುತ್ತಿದ್ದಾರೆ ಎಂಬ ಆತಂಕಕಾರಿ ಮಾಹಿತಿಯನ್ನು ಸೇನೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪಾಕಿಸ್ತಾನ ತನ್ನ ನೀತಿ ಹಾಗೂ ಧೋರಣೆಯಲ್ಲಿ ಬದಲಾವಣೆ ಮಾಡಿಕೊಂಡರೆ ಮಾತ್ರ ಭಯೋತ್ಪಾದನೆ ನಿಲ್ಲಲು ಸಾಧ್ಯ ಎಂದು ಲೆಪ್ಟಿನೆಂಟ್ ಜನರಲ್ ಪರಮ್ ಜಿತ್ ಸಿಂಗ್ ಹೇಳಿದ್ದಾರೆ.
ಒಳ ನುಸುಳುವಿಕೆ ತಡೆಯಲು ಭಾರತ ಸೇನೆ ಸಾಕಷ್ಟು ಸನ್ನದ್ಧವಾಗಿದೆ. ಪಾಕಿಸ್ತಾನದ ವಿವಿಧ ಕಡೆಗಳಿಂದ ಸುಮಾರು 140 ರಿಂದ 160 ಮಂದಿ ಉಗ್ರರನ್ನು ಭಾರತದೊಳಗೆ ನುಸುಳಲು ಪ್ರಯತ್ನಿಸಲಾಗುತ್ತಿದೆ ಎಂದು ಅವರು ಸುದ್ದಿ ಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಅಂತಾರಾಷ್ಟ್ರೀಯ ಗಡಿ ನಿಯಂತ್ರಣ ರೇಖೆ ಬಳಿ ಡಿಜಿಎಂಓ ಮಟ್ಟದ ಮಾತುಕತೆಯ ನಂತರ ಕದನ ವಿರಾಮ ಉಲ್ಲಂಘನೆ ಕಡಿಮೆಯಾಗಿದೆ. ಆದಾಗ್ಯೂ, ಪಾಕಿಸ್ತಾನ ಸೇನೆಯಿಂದ ಅಪ್ರಚೋದಿತ ಗುಂಡಿನ ದಾಳಿ ಮುಂದುವರೆದಿದೆ. ಉದ್ದೇಶಪೂರ್ವಕವಾಗಿ ನಾವು ಗುಂಡಿನ ದಾಳಿ ನಡೆಸುವುದಿಲ್ಲ ಆದರೆ, ಅವರಿಗೆ ಸೂಕ್ತ ಪ್ರತ್ಯುತ್ತರ ನೀಡುತ್ತಿದ್ದೇವೆ. ಒಳನುಸುಳುವಿಕೆ ತಡೆಗಟ್ಟುವಲ್ಲಿ ಭಾರತ ಸೇನೆ ಸದೃಢವಾಗಿದೆ ಎಂದು ಹೇಳಿದ್ದಾರೆ.
ಚಳಿ ಗಾಲದಲ್ಲಿ ಹೆಚ್ಚಿನ ಹಿಮ ಸುರಿಯುವ ಪ್ರದೇಶ ಹಾಗೂ ಇನ್ನಿತರ ಮಾರ್ಗಗಳ ಮೂಲಕ ಪಾಕಿಸ್ತಾನಿ ಸೈನಿಕರು ದೇಶದೊಳಗೆ ನುಸುಳದಂತೆ ಎಲ್ಲಾ ಕ್ರಮ ಕೈಗೊಳ್ಳಲಾಗಿದೆ. ಎಲ್ಲಾ ಭದ್ರತಾ ಏಜೆನ್ಸಿಗಳೊಂದಿಗೆ ಸಹಕಾರ ಹೊಂದಿರುವುದಾಗಿ ಪರಮ್ ಜಿತ್ ಸಿಂಗ್ ತಿಳಿಸಿದ್ದಾರೆ.
Advertisement