ಭಿಲಾಯಿ: ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಬುಧವಾರ ತೀವ್ರ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು, ಮೋದಿ ಒಬ್ಬ ಅಹಂಕಾರದ ವ್ಯಕ್ತಿ ಎಂದು ಕಿಡಿ ಕಾರಿದ್ದಾರೆ.
ಇಂದು ಛತ್ತೀಸ್ ಗಢದ ಎರಡನೇ ಹಂತದ ವಿಧಾನಸಭಾ ಚುನಾವಣೆ ಪ್ರಚಾರ ರ್ಯಾಲಿ ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಒಬ್ಬ ವ್ಯಕ್ತಿ ಅಥವಾ ಪಕ್ಷದಿಂದ ದೇಶವನ್ನು ನಡೆಸಲಾಗುವುದಿಲ್ಲ ಎಂದು ಹೇಳಿದರು.
ಸಾಮಾನ್ಯ ವ್ಯಕ್ತಿಗಳ ಬೆವರು ಮತ್ತು ರಕ್ತದಿಂದ ಭಾರತ ಅಭಿವೃದ್ಧಿ ಸಾಧಿಸಿದೆ ಎನ್ನುವುದು ಪ್ರಧಾನಿ ಮೋದಿಗೆ ಏಕೆ ಅರ್ಥವಾಗುತ್ತಿಲ್ಲ. ಅವರು ಏಕೆ 2014ರಲ್ಲಿ ತಾವು ನೀಡಿದ್ದ ಭರವಸೆಗಳ ಬಗ್ಗೆ ಮಾತನಾಡುತ್ತಿಲ್ಲ ಎಂದು ರಾಹುಲ್ ಪ್ರಶ್ನಿಸಿದ್ದಾರೆ.
ಮೋದಿ ಪ್ರಧಾನಿಯಾಗುವ ಮುನ್ನವೇ ಆನೆ (ಭಾರತ) ನಿದ್ರಿಸುತ್ತಿದೆ ಎಂದು ಹೇಳುವ ಮೂಲಕ ಅವರು ದೇಶದ ಜನರನ್ನು ಅವಮಾನಿಸಿದ್ದರು. ಅಂತಹ ಟೀಕೆಗಳನ್ನು ಮಾಡುವ ಮೂಲಕ, ಮೋದಿ ಅವರು 1955 ರಿಂದ ಇಲ್ಲಿ ಕೆಲಸ ಮಾಡಿದ್ದ ಭಿಲಾಯಿ ಉಕ್ಕು ಸ್ಥಾವರದ ಕಾರ್ಮಿಕರನ್ನು ಅವಮಾನಿಸಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.