ನವದೆಹಲಿ: ಜೈಶ್-ಇ-ಮೊಹಮ್ಮದ್ (ಜೆಇಎಂ)ನ ಆರು ಉಗ್ರರು ಫಿರೋಜ್ಪುರದಲ್ಲಿನ ಅಂತಾರಾಷ್ಟ್ರೀಯ ಗಡಿ ಮೂಲಕ ದೇಶದೊಳಗೆ ನುಸುಳಿದ್ದು, ರಾಷ್ಟ್ರ ರಾಜಧಾನಿ ದೆಹಲಿಯತ್ತ ಸಾಗುತ್ತಿರಬಹುದು ಎಂದು ಪಂಜಾಬ್ ಪೊಲೀಸ್ ಉಗ್ರ ನಿಗ್ರಹ ದಳ ಎಚ್ಚರಿಸಿದೆ. ಅಲ್ಲದೆ ಪಂಜಾಬ್ ನಾದ್ಯಂತ ಕಟ್ಟೆಚ್ಚರ ಘೋಷಿಸಿದೆ.
ಆರು ಜೆಇಎಂ ಉಗ್ರರು ಪಂಜಾಬ್ ಪ್ರವೇಶಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಅವರು ಪಂಜಾಬ್ ನಿಂದ ದೆಹಲಿಗೆ ಹೋಗಲು ಯೋಜನೆ ಹಾಕಿಕೊಂಡಿದ್ದಾರೆ ಎಂದು ಗುಪ್ತಚರ ದಳದ ಇನ್ಸ್ಪೆಕ್ಟರ್ ಜನರಲ್ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.
ಪಂಜಾಬ್ ನಲ್ಲಿ ಭದ್ರತಾ ವ್ಯವಸ್ಥೆಯನ್ನು, ವಿಶೇಷವಾಗಿ ಗಡಿ ಭಾಗದಲ್ಲಿ, ಹೆಚ್ಚಿಸಬೇಕೆಂದು ಅವರು ಕೇಳಿಕೊಂಡಿದ್ದಾರೆ.
ಭಾರತ - ಪಾಕ್ ಗಡಿಯಲ್ಲಿ ಎರಡನೇ ಹಂತದ ಭದ್ರತೆಯನ್ನು ಬಲಪಡಿಸುವ ಅಗತ್ಯವಿದೆ ಮತ್ತು ಬಿಎಸ್ಎಫ್ ಹಾಗೂ ಇತರ ಪೊಲೀಸ್/ರಕ್ಷಣಾ ವ್ಯವಸ್ಥೆಗಳ ಜತೆಗೆ ನಿಕಟವಾಗಿ ಕೆಲಸ ಮಾಡುವ ಅಗತ್ಯವಿದೆ ಎಂದು ಅವರು ಎಚ್ಚರಿಸಿದ್ದಾರೆ.