ಸೌದಿ ಅರೇಬಿಯಾದಲ್ಲಿ ತ್ರಿವರ್ಣ ಧ್ವಜದೊಂದಿಗೆ ಫೋಟೋ ಕ್ಲಿಕ್ಕಿಸಿದ ಭಾರತೀಯ ಮೂಲದ ಗುಜರಾತ್ ನ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿತ್ತು. ನಂತರ ಕೇಂದ್ರ ಸರ್ಕಾರದ ಮಧ್ಯಪ್ರವೇಶದ ನಂತರ ಇಬ್ಬರನ್ನೂ ಬಿಡುಗಡೆ ಮಾಡಲಾಗಿದೆ.
ವಡೋದರಾದ ನಿವಾಸಿಯಾಗಿರುವ ಇಮ್ತಿಯಾಜ್, ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಮೆಕ್ಕಾಗೆ ತೆರಳಿದ್ದರು. ಈ ವೇಳೆ ಮೆಕ್ಕಾದಲ್ಲಿ ತ್ರಿವರ್ಣ ಧ್ವಜದೊಂದಿಗೆ ಇರುವ ತಮ್ಮ ಮಗನ ಫೋಟೊ ಹಾಕಿದ್ದರು. ಇಷ್ಟಕ್ಕೇ ಸೌದಿ ಅರೇಬಿಯಾ ಪೊಲೀಸರು ಆತನನ್ನು ಬಂಧಿಸಿದ್ದರು.
ಜೆಡ್ಡಾದಲ್ಲಿರುವ ಭಾರತದ ದೂತಾವಾಸ ಕಚೇರಿ ಮಧ್ಯಪ್ರವೇಶ ಮಾಡಿದ ಬಳಿಕ ಬಂಧಿಸಲಾಗಿದ್ದ ಅಪ್ಪ-ಮಗನನ್ನು ಬಿಡುಗಡೆ ಮಾಡಲಾಗಿದೆ. ಹರಾಮ್ ಪ್ರದೇಶದಲ್ಲಿ ಧ್ವಜವನ್ನು ಪ್ರದರ್ಶಿಸುವುದು ನಿಷೇಧಿಸಲಾಗಿದೆ. ನಮ್ಮ ಅಧಿಕಾರಿಗಳು ಇಮ್ತಿಯಾಜ್ ಅಲಿ ಹಾಗೂ ಉಝೈರ್ ಅಲಿ ಅವರನ್ನು ಭೇಟಿ ಮಾಡಿದ್ದಾರೆ. ನಮ್ಮ ಅಧಿಕಾರಿಗಳ ಮಧ್ಯಪ್ರವೇಶದ ನಂತರ ಇಮ್ತಿಯಾಜ್ ಹಾಗೂ ಅವರ ಪುತ್ರನನ್ನು ಬಿಡುಗಡೆ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇಮ್ತಿಯಾಜ್ ಬಂಧನದ ವಿಚಾರ ತಿಳಿಯುತ್ತಿದ್ದಂತೆಯೇ ಕುಟುಂಬಸ್ಥರು ಪ್ರಧಾನಿ ಮೋದಿ, ಸುಷ್ಮಾ ಸ್ವರಾಜ್, ಗುಜರಾತ್ ಸಿಎಂ ರೂಪಾನಿ, ಜೆಡ್ಡಾದಲ್ಲಿರುವ ದೂತವಾಸ ಕಚೇರಿ ಟ್ವೀಟ್ ಖಾತೆಗಳನ್ನು ಟ್ಯಾಗ್ ಮಾಡಿ ಪರಿಸ್ಥಿತಿ ವಿವರಿಸಿದ್ದರು.