ದೇಶದ ಪ್ರಧಾನಿಯಾದವರು ಸಂಯಮದಿಂದ ವರ್ತಿಸಬೇಕು: ಮೋದಿಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸಲಹೆ

ಬಿಜೆಪಿಯೇತರ ಸರ್ಕಾರವಿರುವ ರಾಜ್ಯಗಳಿಗೆ ಭೇಟಿ ನೀಡುವಾಗ ಪ್ರಧಾನಿ ನರೇಂದ್ರ ಮೋದಿ ಸಂಯಮ ...
ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಮಾಜಿ ಪ್ರಧಾನಿ ಡಾ ಮನಮೋಹನ್ ಸಿಂಗ್
ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಮಾಜಿ ಪ್ರಧಾನಿ ಡಾ ಮನಮೋಹನ್ ಸಿಂಗ್

ನವದೆಹಲಿ: ಬಿಜೆಪಿಯೇತರ ಸರ್ಕಾರವಿರುವ ರಾಜ್ಯಗಳಿಗೆ ಭೇಟಿ ನೀಡುವಾಗ ಪ್ರಧಾನಿ ನರೇಂದ್ರ ಮೋದಿ ಸಂಯಮ ತೋರಿಸಬೇಕು, ದೇಶದ ಪ್ರಧಾನಿಯಾಗಿ ತಮ್ಮ ಗುಣನಡತೆಗಳಿಂದ ಮಾದರಿಯಾಗಿರಬೇಕು ಎಂದು ಮಾಜಿ ಪ್ರಧಾನಿ ಡಾ ಮನಮೋಹನ್ ಸಿಂಗ್ ಸಲಹೆ ನೀಡಿದ್ದಾರೆ.

ಕೇಂದ್ರದ ಮಾಜಿ ಸಚಿವ ಮನೀಶ್ ತಿವಾರಿ ಬರೆದಿರುವ ಫೇಬಲ್ಸ್ ಆಫ್ ಫ್ರಾಕ್ಚರ್ಡ್ ಟೈಮ್ಸ್ ಪುಸ್ತಕವನ್ನು ದೆಹಲಿಯಲ್ಲಿ ನಿನ್ನೆ ಬಿಡುಗಡೆ ಮಾಡಿ ಮಾತನಾಡಿದ ಅವರು, ನರೇಂದ್ರ ಮೋದಿಯವರು ಪ್ರಧಾನಿಯಾಗಿ ಕೆಲವು ಜವಾಬ್ದಾರಿಗಳನ್ನು ಪಾಲಿಸಬೇಕು ಎಂದು ಅವರಿಗೆ ಸಲಹೆ ನೀಡಲು ಬಯಸುತ್ತೇನೆ ಎಂದರು.

ಬಿಜೆಪಿ ಅಧಿಕಾರವಿರುವ ರಾಜ್ಯಗಳಿಗೆ ಹೋದಾಗ ಅವರ ವರ್ತನೆ ಬೇರೆಯದ್ದೇ ರೀತಿ ಇರುತ್ತದೆ. ಅಲ್ಲಿನ ಮುಖ್ಯಮಂತ್ರಿಗಳ ಜೊತೆ ಉತ್ತಮ ಬಾಂಧವ್ಯದಿಂದ ನಡೆದುಕೊಳ್ಳುತ್ತಾರೆ. ಅದೇ ಬಿಜೆಪಿಯೇತರ ಸರ್ಕಾರವಿರುವ ರಾಜ್ಯಗಳಿಗೆ ಹೋದಾಗ ಅಲ್ಲಿ ಸಂಯಮ ತೋರಿಸುವುದಿಲ್ಲ. ಅಲ್ಲಿ ಮಾತನಾಡುವಾಗ ದೇಶದ ನಾಯಕರಾಗಿ ಬಳಸಬಾರದ ಭಾಷೆಗಳನ್ನು ಬಳಸುತ್ತಾರೆ, ಅದು ಅವರಿಗೆ ಅಭ್ಯಾಸವಾಗಿಬಿಟ್ಟಿದೆ ಎಂದು ಟೀಕಿಸಿದರು.

ದೇಶದ ಪ್ರಧಾನಿಯಾದವರು ಇತರರಿಗೆ ಮಾದರಿಯಾಗಿರಬೇಕು. ಅವರು ದೇಶದ ನಾಗರಿಕರಿಗೆ ಪ್ರಧಾನ ಮಂತ್ರಿ, ಅವರ ವರ್ತನೆ, ನಡತೆಗಳು ಮೌಲ್ಯಯುತವಾಗಿರಬೇಕು ಮತ್ತು ಅದು ಯಾವತ್ತೂ ಸ್ಥಿರವಾಗಿರಬೇಕು, ಆ ರೀತಿ ಇದ್ದರೆ ಮಾತ್ರ ಪ್ರಧಾನಿಯಾಗಲು ಸಾಧ್ಯ ಎಂದು ನೆರೆದ ಜನಸಮೂಹವನ್ನು ಉದ್ದೇಶಿಸಿ ಮಾತನಾಡುವಾಗ ಹೇಳಿದರು.

ಯುಪಿಎ ಆಡಳಿತ ಸಂದರ್ಭದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದ ರಾಜ್ಯಗಳಿಗೆ ಕೇಂದ್ರ ಸರ್ಕಾರ ತಾರತಮ್ಯ ಮಾಡುತ್ತಿರಲಿಲ್ಲ. ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಬೇಕಾದರೆ ಕೇಳಿ, ಅವರೇ ನನ್ನ ಮಾತನ್ನು ಒಪ್ಪುತ್ತಾರೆ ಎಂದರು.

ಭಾರತಕ್ಕೆ ಮೋದಿಯವರು ಪ್ರಧಾನ ಮಂತ್ರಿಯಾಗಿದ್ದು ಈ ದೇಶದ ದುರಂತ ಎಂದು ಮನಮೋಹನ್ ಸಿಂಗ್ ಈ ಹಿಂದೆ ಟೀಕಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com