ಉದಯಪುರ: ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಗ್ಯಾಂಗ್ ಸ್ಟರ್ ಗಳೆಂದು ಕಾಂಗ್ರೆಸ್ ಮುಖಂಡ ರಾಜ್ ಬಬ್ಬರ್ ಮತ್ತೊಂದು ವಿವಾದಾತ್ಮಾಕ ಹೇಳಿಕೆ ನೀಡಿದ್ದಾರೆ.
ರಾಜಸ್ತಾನದ ಉದಯಪುರದಲ್ಲಿಂದು ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಗುಜರಾತಿನಿಂದ ಬಂದಿರುವ ಈ ಇಬ್ಬರು ನಾಯಕರು, ಬಡ ಜನರನ್ನು ಕೊಲ್ಲುವ ಉದ್ದೇಶದಿಂದ ಗುಂಪು ಕಟ್ಟಿಕೊಂಡಿದ್ದಾರೆ ಎಂದು ಹೇಳಿದರು.
ಗುಜರಾತ್ನ ಇಬ್ಬರು ಗ್ಯಾಂಗ್ಸ್ಟರ್ ಗಳಿದ್ದಾರೆ. ಇವರಲ್ಲಿ ಒಬ್ಟಾತ ಪಕ್ಷವೊಂದರ ಅಧ್ಯಕ್ಷರೂ ಆಗಿದ್ದಾರೆ; ಇವರು ನಡೆಸುತ್ತಿರುವ ಗ್ಯಾಂಗ್ ಬಡಜನರನ್ನು ಕೊಲ್ಲುವುದರಲ್ಲಿ ನಿರತವಾಗಿದೆ' ಎಂದು ರಾಜ್ ಬಬ್ಬರ್ ಹೇಳಿದರು.
ಕಳೆದ 23ರಂದು ರಾಜ್ ಬಬ್ಬರ್ ಅವರು ಚುನಾವಣಾ ಪ್ರಚಾರ ಭಾಷಣ ಮಾಡುತ್ತಾ, 'ರೂಪಾಯಿ ದರ ಎಷ್ಟು ಕುಸಿಯತ್ತಿದೆ ಎಂದರೆ ಅದರ ಮೌಲ್ಯವು ಪ್ರಧಾನಿ ಮೋದಿ ಅವರ ತಾಯಿ ಹೀರಾಬೆನ್ ಅವರ ವಯಸ್ಸಿನ ಸಂಖ್ಯೆಯತ್ತ ಹೋಗುತ್ತಿದೆ' ಎಂದು ಟೀಕಿಸಿದ್ದರು.
ಉತ್ತರ ಪ್ರದೇಶ ಕಾಂಗ್ರೆಸ್ ಮುಖ್ಯಸ್ಥರಾಗಿರುವ ರಾಜ್ ಬಬ್ಬರ್, ಪ್ರಧಾನಿ ಮೋದಿ ಅವರ ಆರ್ಥಿಕ ನೀತಿಗಳ ಫಲವನ್ನು ಟೀಕಿಸುವಾಗ ಅನಗತ್ಯವಾಗಿ ಮೋದಿ ತಾಯಿಯನ್ನು ಉಲ್ಲೇಖೀಸಿ ವಿವಾದ ಸೃಷ್ಟಿಸಿದ್ದರು.
ರಾಜಸ್ಥಾನದಲ್ಲಿ ಡಿ.7ರಂದು ಚುನಾವಣೆ ನಡೆಯಲಿದ್ದು ಡಿ.11ರಂದು ಮತ ಎಣಿಕೆ ನಡೆದು ಫಲಿತಾಂಶ ಹೊರಬರಲಿದೆ.
Advertisement