ಭಾರತೀಯ ನ್ಯಾಯಾಂಗ ವಿಶ್ವದಲ್ಲೇ ಅತ್ಯಂತ ಬಲಿಷ್ಠ, ಸದೃಢವಾಗಿದೆ: ನಿರ್ಗಮಿತ ಸಿಜೆಐ ದೀಪಕ್ ಮಿಶ್ರಾ

ಭಾರತೀಯ ನ್ಯಾಯಾಂಗ ವಿಶ್ವದಲ್ಲೇ ಅತ್ಯಂತ ಬಲಿಷ್ಠ ಮತ್ತು ಸದೃಢವಾಗಿದ್ದು, ಯುವ ವಕೀಲರು ನ್ಯಾಯಾಂಗ ವ್ಯವಸ್ಥೆಯನ್ನು....
ದೀಪಕ್ ಮಿಶ್ರಾ
ದೀಪಕ್ ಮಿಶ್ರಾ
Updated on
ನವದೆಹಲಿ: ಭಾರತೀಯ ನ್ಯಾಯಾಂಗ ವಿಶ್ವದಲ್ಲೇ ಅತ್ಯಂತ ಬಲಿಷ್ಠ ಮತ್ತು ಸದೃಢವಾಗಿದ್ದು, ಯುವ ವಕೀಲರು ನ್ಯಾಯಾಂಗ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂದು ನಿರ್ಗಮಿತ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರು ಸೋಮವಾರ ಹೇಳಿದ್ದಾರೆ.
ಇಂದು ಸುಪ್ರೀಂ ಕೋರ್ಟ್ ಆವರಣದಲ್ಲಿ ಆಯೋಜಿಸಿದ್ದ ಬಿಳ್ಕೋಡುಗೆ ಸಮಾರಂಭ ಉದ್ದೇಶಿಸಿ ಮಾತನಾಡಿದ ದೀಪಕ್ ಮಿಶ್ರಾ ಅವರು, ನಮ್ಮ ನ್ಯಾಯಾಂಗ ವ್ಯವಸ್ಥೆ ವಿಶ್ವದಲ್ಲೇ ಅತ್ಯಂತ ಪ್ರಬಲವಾಗಿದ್ದು, ಲಕ್ಷಾಂತರ ಪ್ರಕರಣಗಳನ್ನು ನಿಭಾಯಿಸುವ ಸಾಮರ್ಥ್ಯ ಹೊಂದಿದೆ ಎಂದರು.
ಸುಪ್ರೀಂ ಕೋರ್ಟ್ ಯಾವತ್ತಿಗೂ ಸುಪ್ರೀಂ ಆಗಿಯೇ ಇರಲಿದೆ ಎಂದ ಸಿಜೆಐ,  ನನ್ನ ಬಗ್ಗೆ ಸಾಕಷ್ಟು ವಿಷಯಗಳನ್ನು ಹೇಳಲಾಗಿದೆ. ನಾನು  ಜನರನ್ನು ಅವರ ಇತಿಹಾಸಗಳ ಆಧಾರ ಮೇಲೆ ಅಳೆಯುವುದಿಲ್ಲ. ಸಮಾಜವು ಯಾವುದೇ ವ್ಯಕ್ತಿಯ ಎರಡನೇ ತಾಯಿಯಾಗಿದೆ. ಶುದ್ಧವಾದ ಆತ್ಮಸಾಕ್ಷಿಯು ಕೆಲಸವನ್ನು ಸುಲಭ ಮಾಡುತ್ತದೆ ಎಂದರು.
ನ್ಯಾಯಾಂಗವು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಬಡವರು ಹಾಗು ಶ್ರೀಮಂತರ ಕಣ್ಣೀರುಗಳು ಒಂದೇ ಆಗಿವೆ ಎಂದು ಮಿಶ್ರಾ ತಮ್ಮ ಮನದಾಳದ ಮಾತುಗಳನ್ನು ಆಡಿದ್ದಾರೆ.
ಇತ್ತೀಚಿನ ಶಬರಿಮಲೆ ವಿವಾದ, ಆಧಾರ್ ವಿವಾದ, ಅನೈತಿಕ ಸಂಬಂಧ, ಆಯೋದ್ಯ ವಿವಾದ ಸೇರಿದಂತೆ ಹಲವು ಮಹತ್ವ ತೀರ್ಪುಗಳನ್ನು ನೀಡಿದ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನಾಳೆ ನಿವೃತ್ತರಾಗುತ್ತಿದ್ದಾರೆ.
ಈ ವೇಳೆ ಮಾತನಾಡಿದ ಮುಂದಿನ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯ್‌ ಅವರು, ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರು ಪರಮ ನಿಷ್ಠೆಯಿಂದ ವೃತ್ತಿಯನ್ನು ನಿರ್ವಹಿಸಿದ್ದು, ವ್ಯಕ್ತಿಗತ ಸ್ವಾತಂತ್ರ‍್ಯವನ್ನು ಎತ್ತಿ ಹಿಡಿದಿದ್ದಾರೆ ಎಂದರು.
ನಾವು ಎಲ್ಲರೂ ಸಂವಿಧಾನಕ್ಕೆ ಬದ್ಧರಾಗಿದ್ದು, ಅದರಂತೆ ನಡೆದರೆ ಮಾತ್ರ ಉತ್ತಮ ಜೀವನ ಸಾಧ್ಯ ಎಂದು ಗೊಗೋಯ್ ಹೇಳಿದರು.
ನ್ಯಾಯಮೂರ್ತಿ ರಂಜನ್‌ ಗೊಗೋಯ್‌ ಅವರು ಬುಧವಾರ ಸುಪ್ರೀಂ ಕೋರ್ಟ್ ನೂತನ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com