ಲಖನೌ: ಕಾಂಗ್ರೆಸ್ ಪಕ್ಷಕ್ಕಾಗಿ ಧೀರ್ಘಕಾಲದಿಂದ ಕಾಯುತ್ತಿದ್ದು, ಈಗ ಮಧ್ಯಪ್ರದೇಶ ಚುನಾವಣೆಗಾಗಿ ಬಿಎಸ್ಪಿ ಹಾಗೂ ಗೊಂಡ್ವಾನ ಗಣತಂತ್ರ ಪಕ್ಷದೊಂದಿಗೆ ಸಮಾಲೋಚನೆ ನಡೆಸುವುದಾಗಿ ಸಮಾಜವಾದಿ ಪಕ್ಷ ಹೇಳಿದೆ.
ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ಪಕ್ಷ ಹಠಮಾರಿ ಧೋರಣೆ ಪ್ರದರ್ಶಿಸುತ್ತಿದ್ದು, ನಮ್ಮ ಪಕ್ಷವನ್ನು ಮುಗಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿ ಬಿಎಸ್ಪಿ ನಾಯಕಿ ಮಾಯಾವತಿ ಕಾಂಗ್ರೆಸ್ ಜೊತೆಗಿನ ಮೈತ್ರಿಯಿಂದ ಹೊರ ನಡೆದ ನಂತರ ಎಸ್ಪಿ ಹೇಳಿಕೆ ನೀಡಿದೆ.
ಕಾಂಗ್ರೆಸ್ ಪಕ್ಷಕ್ಕಾಗಿ ಧೀರ್ಘ ಕಾಲದಿಂದ ಕಾಯುತ್ತಿದ್ದೇವೆ. ನಾವು ಎಷ್ಟು ಸಮಯ ಕಾಯಬೇಕು. ಈಗ ಮಧ್ಯಪ್ರದೇಶ ಚುನಾವಣೆಗಾಗಿ ಬಿಎಸ್ಪಿ ಹಾಗೂ ಗೊಂಡ್ವಾನ ಗಣತಂತ್ರ ಪಕ್ಷದೊಂದಿಗೆ ಸಮಾಲೋಚಿಸಿ ಮೈತ್ರಿ ಮಾಡಿಕೊಳ್ಳಬೇಕಿದೆ ಎಂದು ಎಸ್ಪಿ ಅಧ್ಯಕ್ಷ ಅಖಿಲೇಶ್ ಯಾದವ್ ಹೇಳಿದರು.
ಚಿಕ್ಕ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಪ್ರಕಟಿಸಲು ವಿಳಂಬ ಮಾಡದಂತೆ ಕಾಂಗ್ರೆಸ್ ಹೃದಯ ವಿಶಾಲತೆ ಪ್ರದರ್ಶಿಸಬೇಕಾಗಿದೆ ಎಂದು ಯಾದವ್ ಮನವಿ ಮಾಡಿಕೊಂಡಿದ್ದಾರೆ.
Advertisement