ಮೂರು ದಿನಗಳ ತಜಿಕಿಸ್ತಾನ ಭೇಟಿಗೆ ತೆರಳಿರುವ ರಾಷ್ಟ್ರಪತಿ ರಾಮನಾಥ್ ಕೋವಿಂದ್
ನವದೆಹಲಿ: ತಜಿಕಿಸ್ತಾನಕ್ಕೆ ಮೂರು ದಿನಗಳ ಭೇಟಿಗಾಗಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ಸವಿತಾ ಕೋವಿಂದ್ ತೆರಳಿದ್ದಾರೆ.
ಅಲ್ಲಿ ತಮ್ಮ ಭೇಟಿ ಸಂದರ್ಭದಲ್ಲಿ ರಾಷ್ಟ್ರಪತಿಗಳು ತಜಿಕಿಸ್ತಾನದ ರಾಷ್ಟ್ರಪತಿ ಎಮಮೊಲಿ ರಹಮಾನ್ ಅವರನ್ನು ಭೇಟಿ ಮಾಡಲಿದ್ದಾರೆ. ಅಲ್ಲದೆ ಸಂಸತ್ತಿನ ಅಧ್ಯಕ್ಷ ಶುಕುರ್ಜೊನ್ ಝುಹುರೊವ್, ತಜಕಿಸ್ತಾನ ಪ್ರಧಾನಿ ಖೊಹಿರ್ ರಸುಲ್ಜೊಡಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ರಾಷ್ಟ್ರಪತಿಗಳೊಂದಿಗೆ ನಿಯೋಗದಲ್ಲಿ ರಕ್ಷಣಾ ಇಲಾಖೆ ರಾಜ್ಯ ವಕ್ತಾರ ಸುಭಾಷ್ ಭಮ್ರೆ ಮತ್ತು ರಾಜ್ಯಸಭಾ ಸದಸ್ಯ ಶಮ್ಶರ್ ಸಿಂಗ್ ಮನ್ಹಾಸ್ ಕೂಡ ಇದ್ದಾರೆ.
ತಜಿಕ್ ರಾಷ್ಟ್ರೀಯ ವಿಶ್ವವಿದ್ಯಾಲಯಕ್ಕೆ ರಾಷ್ಟ್ರಪತಿಗಳು ಭೇಟಿ ನೀಡಿ ಅಲ್ಲಿನ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಲಿದ್ದಾರೆ. ತಜಿಕಿಸ್ತಾನದಲ್ಲಿನ ಭಾರತೀಯರನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಕೇಂದ್ರ ಏಷ್ಯಾ ದೇಶಕ್ಕೆ ರಾಷ್ಟ್ರಪತಿ ಕೋವಿಂದ್ ಭೇಟಿ ನೀಡುತ್ತಿರುವುದು ಇದೇ ಮೊದಲು. ಭೇಟಿ ವೇಳೆ ಅವರು ದ್ವಿಪಕ್ಷೀಯ, ಸ್ಥಳೀಯ ಮತ್ತು ಬಹುಹಂತದ ಸಹಕಾರ ಕುರಿತು ಮಾತುಕತೆ ನಡೆಸಲಿದ್ದಾರೆ. 2009ರಲ್ಲಿ ಅಂದಿನ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ತಜಿಕಿಸ್ತಾನಕ್ಕೆ ಭೇಟಿ ನೀಡಿದ್ದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ