ಅಮೃತಸರ: ದೇಶಾದ್ಯಂತ ಆಘಾತದ ಅಲೆ ಎಬ್ಬಿಸಿದ್ದ ಅಮೃತಸರ ರೈಲು ದುರಂತದಲ್ಲಿ ಮೃತಪಟ್ಟ 59 ಜನರ ಪೈಕಿ 39 ಜನರಿಗೆ ಅವರ ಕುಟುಂಬಸ್ಥರು, ಸಂಬಂಧಿಕರು ಕಣ್ಣೀರ ವಿದಾಯ ಹೇಳಿದರು.
ಅಮೃತಸರದ ವಿವಿಧ ಸಶ್ಮಾನಗಳಲ್ಲಿ ಸ್ನೇಹಿತರು, ಮತ್ತು ಕುಟುಂಬ ಸದಸ್ಯರ ಸಮ್ಮುಖದಲ್ಲಿ ಸಾಮೂಹಿಕ ಅಂತ್ಯಕ್ರಿಯೆ ನೆರವೇರಿಸಲಾಯಿತು. ತಮ್ಮನ್ನು ತುಂಬಾ ಪ್ರೀತಿಸುತ್ತಿದ್ದವರು ಇಲ್ಲ ಎಂಬುದನ್ನೂ ನಂಬಲು ಯಾರಿಗೂ ಆಗುತ್ತಿರಲಿಲ್ಲ.
ದುರಂತದಲ್ಲಿ ಮೃತಪಟ್ಟವರಲ್ಲಿ ಹೆಚ್ಚಿನ ಮಂದಿ ಬಿಹಾರದಿಂದ ಬಂದಿದ್ದವರಾಗಿದ್ದರು. ಅವರ ಮಕ್ಕಳು ಹಾಗೂ ಕುಟುಂಬಸ್ಥರ ರೋಧನ ಮುಗಿಲು ಮುಟ್ಟಿತು.
ಇದಕ್ಕೂ ಮುನ್ನ ದುರಂತದಲ್ಲಿ ಮೃತಪಟ್ಟಿದ್ದ 59 ಜನರ ಪೈಕಿ 40 ಮಂದಿಯನ್ನು ಪತ್ತೆ ಹಚ್ಚಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದರು.
ಅಮೃತಸರದ ಜೋಡಾ ಪಾಠಖ್ ಬಳಿ ದಸರಾ ಅಂಗವಾಗಿ ಆಯೋಜಿಸಲಾಗಿದ್ದ ರಾವಣ ದಹನ ಕಾರ್ಯಕ್ರಮವನ್ನು ರೈಲ್ವೆ ಹಳಿ ಮೇಲೆ ನಿಂತು ವೀಕ್ಷಿಸುತ್ತಿದ್ದ ಜನರ ಮೇಲೆ ವೇಗವಾಗಿ ಬಂದ ರೈಲು ಹರಿದು 59 ಜನರು ಮೃತಪಟ್ಟಿದ್ದರು.
ದುರ್ಗಿಯಾನ ಮಂದಿರ ಸ್ಮಶಾನದಲ್ಲಿ 31 ಮೃತದೇಹಗಳ ಸಾಮೂಹಿಕ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ , ಐದು ಮೃತದೇಹಗಳನ್ನು ಮೊಹಕಾಂಪುರ ಹಾಗೂ ಮೂರು ಮೃತದೇಹಗಳನ್ನು ಗುರುದ್ವಾರದ ಶಯೀದ್ ಗಂಜ್ ನಲ್ಲಿ ಅಂತ್ಯಸಂಸ್ಕಾರ ನಡೆಸಲಾಗಿದೆ ಎಂದು ಹೆಚ್ಚುವರಿ ಉಪ ಆಯುಕ್ತ ಸಂದೀಪ್ ರಿಷಿ ತಿಳಿಸಿದ್ದಾರೆ.
ನಾಲ್ಕು ಮೃತದೇಹಗಳನ್ನು ಅಂತ್ಯಸಂಸ್ಕಾರ ನೆರವೇರಿಸಲು ಉತ್ತರ ಪ್ರದೇಶಕ್ಕೆ ತೆಗೆದುಕೊಂಡು ಹೋಗಲಾಗಿದೆ. ಮೂರು ಮೃತದೇಹಗಳನ್ನು ಶವಾಗಾರದಲ್ಲಿ ಇಡಲಾಗಿದ್ದು, ಇಂದು ಅಂತ್ಯಸಂಸ್ಕಾರ ನೆರೆವೇರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ
Advertisement