ತಿರುವನಂತಪುರಂ: ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ವಿರೋಧಿಸಿ ನಡೆದ ಹಿಂಸಾತ್ಮಕ ಪ್ರತಿಭಟನೆಗೆ ಸಂಬಂಧಿಸಿದಂತೆ ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಅವರು ಬಿಜೆಪಿ ಮತ್ತು ಆರ್ ಎಸ್ ಎಸ್ ವಿರುದ್ಧ ಮಂಗಳವಾರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಮತ್ತು ಆರ್ ಎಸ್ಎಸ್ ಕಾರ್ಯಕರ್ತರು ರಾಜ್ಯದಲ್ಲಿ ಉದ್ವಿಗ್ನ ಪರಿಸ್ಥಿತಿ ಸೃಷ್ಟಿಸುವ ಉದ್ದೇಶದಿಂದಲೇ ಹಿಂಸಾತ್ಮಕ ಪ್ರತಿಭಟನೆ ನಡೆಸಿದ್ದಾರೆ ಎಂದು ಸಿಎಂ ಆರೋಪಿಸಿದ್ದಾರೆ.
ಮಾಧ್ಯಮದವರ ಮತ್ತು ಮಹಿಳೆಯರ ಮೇಲಿನ ದಾಳಿಗೆ ಆರ್ ಎಸ್ ಎಸ್ ಪಿತೂರಿಯೇ ಕಾರಣ ಎಂದು ಪಿಣರಾಯ್ ವಿಜಯನ್ ದೂರಿದ್ದಾರೆ.
ಸುಪ್ರೀಂ ಕೋರ್ಟ್ ತೀರ್ಪನ್ನು ಜಾರಿಗೊಳಿಸುವುದು ರಾಜ್ಯ ಸರ್ಕಾರದ ಸಾಂವಿಧಾನಿಕ ಜವಾಬ್ದಾರಿಯಾಗಿದೆ. ಪುಣ್ಯ ಕ್ಷೇತ್ರವನ್ನು ರಣರಂಗವಾಗಿಸಲು ಅವಕಾಶ ನೀಡುವುದಿಲ್ಲ ಎಂದು ಸಿಎಂ ಎಚ್ಚರಿಕೆ ನೀಡಿದ್ದಾರೆ.
ಮಾಸಿಕ ಪೂಜೆ ನಿಮಿತ್ತ ಅಕ್ಟೋಬರ್ 17ರಿಂದ 22ರ ವರೆಗೆ ಅಯ್ಯಪ್ಪಸ್ವಾಮಿ ದೇವಾಲಯ ತೆರೆಯಲಾಗಿತ್ತು. ಈ ಅವಧಿಯಲ್ಲಿ ದೇವರ ದರ್ಶನಕ್ಕೆ 6 ಮಹಿಳೆಯರು ಯತ್ನಸಿದರೂ ಅವರನ್ನು ತಡೆಯಲಾಯಿತು. ಕಳೆದ 5 ದಿನಗಳಿಂದ ನಡೆದ ಹೈಡ್ರಾಮಾ, ಪ್ರತಿಭಟನೆಗೂ ಈಗ ತಾತ್ಕಾಲಿಕ ವಿರಾಮ ಸಿಕ್ಕಿದೆ.