
ಚೆನ್ನೈ: ಎಐಎಡಿಎಂಕೆಯ 18 ಬಂಡಾಯ ಶಾಸಕರ ಅನರ್ಹತೆ ಮಾಡಿರುವ ಸ್ಪೀಕರ್ ನಿರ್ಧಾರವನ್ನು ಮದ್ರಾಸ್ ಹೈಕೋರ್ಟ್ ಗುರುವಾರ ಎತ್ತಿಹಿಡಿದಿದೆ. ಇದರಿಂದ ಕೆ ಪಳನಿಸ್ವಾಮಿ ನೇತೃತ್ವದ ಸರ್ಕಾರಕ್ಕೆ ಗೆಲುವು ಸಿಕ್ಕಂತಾಗಿದೆ.
ನ್ಯಾಯಮೂರ್ತಿ ಎಂ ಸತ್ಯನಾರಾಯಣ ಇಂದು ತೀರ್ಪು ಪ್ರಕಟಿಸಿದ್ದಾರೆ. ಜೂನ್ 14ರಂದು ಹೈಕೋರ್ಟ್ ನ ನ್ಯಾಯಪೀಠ ವೈರುಧ್ಯ ತೀರ್ಪು ನೀಡಿದ ನಂತರ ಸುಪ್ರೀಂ ಕೋರ್ಟ್ ನಿಂದ ನೇಮಕಗೊಂಡಿರುವ ಮೂರನೇ ನ್ಯಾಯಾಧೀಶರು ನೀಡುತ್ತಿರುವ ತೀರ್ಪು ಇದಾಗಿದೆ. ತಾವು ಸ್ವತಂತ್ರ ತೀರ್ಪು ನೀಡಿದ್ದು ಹಿಂದಿನ ನ್ಯಾಯಪೀಠದ ಎರಡು ವೈರುಧ್ಯ ತೀರ್ಪುಗಳಿಂದ ಪ್ರಭಾವಿತನಾಗಿಲ್ಲ ಎಂದು ನ್ಯಾಯಮೂರ್ತಿ ಸತ್ಯನಾರಾಯಣ ಹೇಳಿದ್ದಾರೆ.
ಶಾಸಕರ ಅನರ್ಹತೆ ಮಾಡಿ ಸ್ಪೀಕರ್ ನೀಡಿದ್ದ ತೀರ್ಮಾನವನ್ನು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ ತೀರ್ಪು ನೀಡಿದ್ದರೆ, ಮೂಲ ನ್ಯಾಯಪೀಠದಲ್ಲಿ ಎರಡನೇ ನ್ಯಾಯಾಧೀಶರು ಬೇರೆ ತೀರ್ಪು ನೀಡಿದ್ದರು.
ಮಾಜಿ ಬಂಡಾಯ ನಾಯಕ ಟಿಟಿವಿ ದಿನಕರನ್ ಗೆ ನಿಷ್ಠೆ ತೋರಿಸಿ, ಮುಖ್ಯಮಂತ್ರಿ ಪಳನಿಸ್ವಾಮಿ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಪತ್ರವನ್ನು ಹಿಂದಿನ ರಾಜ್ಯಪಾಲ ಸಿ ಎಚ್ ವಿದ್ಯಾಸಾಗರ್ ರಾವ್ ಅವರಿಗೆ ಸಲ್ಲಿಸಿದ್ದಕ್ಕೆ 18 ಶಾಸಕರನ್ನು ಎಐಎಡಿಎಂಕೆಯಿಂದ ಅನರ್ಹಗೊಳಿಸಲಾಗಿತ್ತು.
ಇದೀಗ ಹೈಕೋರ್ಟ್ ಶಾಸಕರ ಅನರ್ಹತೆಯನ್ನು ಎತ್ತಿಹಿಡಿದಿರುವುದರಿಂದ 18 ಮಂದಿಯ ಶಾಸಕತ್ವ ರದ್ದಾಗಲಿದ್ದು ಅವರ ಕ್ಷೇತ್ರಗಳು ಖಾಲಿಯಾಗುತ್ತವೆ ಮತ್ತು ಅಲ್ಲಿ ಉಪ ಚುನಾವಣೆ ನಡೆಸಬೇಕಾಗುತ್ತದೆ. ಆಗ ಅದು ಆಡಳಿತಾರೂಢ ಎಐಎಡಿಎಂಕೆಗೆ ಪರೀಕ್ಷೆಯಾಗಲಿದೆ.
ಹೈಕೋರ್ಟ್ ತೀರ್ಪು ಬಗ್ಗೆ ಪ್ರತಿಕ್ರಿಯಿಸಿದ ಎಎಂಎಂಕೆ ಮುಖ್ಯಸ್ಥ ಟಿಟಿವಿ ದಿನಕರನ್, ಇದು ನಮಗೆ ಹಿನ್ನಡೆಯಲ್ಲ, ಇದೊಂದು ಕೇವಲ ನನಗೆ ಅನುಭವ. ನಾವು 18 ಅನರ್ಹ ಶಾಸಕರ ಜೊತೆ ಚರ್ಚಿಸಿ ಹೈಕೋರ್ಟ್ ತೀರ್ಪು ವಿರುದ್ಧ ಮೇಲ್ಮನವಿ ಸಲ್ಲಿಸುವ ನಿರ್ಧಾರ ತೆಗೆದುಕೊಳ್ಳುವುದೇ ಅಥವಾ ಈ ಕ್ಷೇತ್ರಗಳಲ್ಲಿ ಉಪ ಚುನಾವಣೆ ಎದುರಿಸುವುದೇ ಎಂದು ಚರ್ಚಿಸಲಿದ್ದೇವೆ ಎಂದಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ತಮಿಳಿಸಾಯಿ ಸೌಂದರರಾಜನ್, ಹೈಕೋರ್ಟ್ ತೀರ್ಪು ನಿರೀಕ್ಷಿತವಾಗಿತ್ತು. ಇಂದಿನ ಸರ್ಕಾರದ ಅನಿಶ್ಥಿತತೆ ಹೈಕೋರ್ಟ್ ತೀರ್ಪಿನಿಂದ ಕೊನೆಗೊಂಡಂತಾಗಿದೆ.
ವಿದುತಲೈ ಚಿರುತೈಗಲ್ ಕಾಚಿ ಅಧ್ಯಕ್ಷ ತೊಲ್ ತಿರುಮವಲನ್ ಹೈಕೋರ್ಟ್ ತೀರ್ಪಿನ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ. ಇದು ಪ್ರಜಾಪ್ರಭುತ್ವ ನಿಯಮಗಳಿಗೆ ವಿರುದ್ಧವಾಗಿದ್ದು ಅನರ್ಹಗೊಂಡ ಶಾಸಕರು ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದರೆ ಅವರಿಗೆ ಅಲ್ಲಿ ನ್ಯಾಯ ಖಂಡಿತಾ ಸಿಗುತ್ತದೆ ಎಂದಿದ್ದಾರೆ.
ಹೈಕೋರ್ಟ್ ತೀರ್ಪಿನ ಮೂಲಕ 214 ಸದಸ್ಯ ಬಲದ ತಮಿಳುನಾಡು ವಿಧಾನಸಭೆಯಲ್ಲಿ 20 ಶಾಸಕರ ಸ್ಥಾನಗಳು ಖಾಲಿಯಾದಂತಾಗಿದೆ. ಎಂ ಕರುಣಾನಿಧಿ ಹಾಗೂ ಎಡಿಎಂಕೆ ಶಾಸಕ ಬೋಸ್ ಅವರ ನಿಧನದಿಂದ 2 ಸ್ಥಾನಗಳು ಖಾಲಿಯಾಗಿವೆ. ಅನರ್ಹಗೊಂಡ 18 ಶಾಸಕರ ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಸುವುದಕ್ಕೆ ಮಧ್ಯಂತರ ತಡೆಯನ್ನು ಸಹ ಹೈಕೋರ್ಟ್ ತೆರವುಗೊಳಿಸಿದೆ.
Advertisement