ಇಂದೋರ್ : ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶ ಕುರಿತಂತೆ ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನೀಡಿರುವ ಹೇಳಿಕೆ "ನ್ಯಾಯಾಂಗದೊಂದಿಗಿನ ಸಂಘರ್ಷ" ಎಂದು ತಪ್ಪಾಗಿ ಅರ್ಥೈಸಬಾರದು ಎಂದು ಬಿಜೆಪಿ ಹೇಳಿದೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬೀತ್ ಪಾತ್ರ, ನಂಬಿಕೆಗಳಿಗೆ ಗೌರವ ಕೊಡಬೇಕೆಂಬುದರಲ್ಲಿ ಬಿಜೆಪಿ ನಂಬಿಕೆ ಹೊಂದಿರುವುದಾಗಿ ತಿಳಿಸಿದರು.
ಶಬರಿಮಲೆ ದೇಗುಲಕ್ಕೆ ಎಲ್ಲಾ ವಯೋಮಾನದ ಮಹಿಳೆಯರಿಗೆ ಪ್ರವೇಶ ಅವಕಾಶ ಕಲ್ಪಿಸುವ ಸುಪ್ರೀಂಕೋರ್ಟ್ ತೀರ್ಪು ವಿರೋಧಿಸಿ ಇತ್ತೀಚಿಗೆ ಅಯ್ಯಪ್ಪ ಭಕ್ತಾಧಿಗಳಿಂದ ಪ್ರತಿಭಟನೆ ನಡೆದಿತ್ತು. ರಾಷ್ಟ್ರೀಯ ಸ್ವಯಂ ಸೇವಕ ಸಂಘ ಕೂಡಾ ಭಕ್ತಾಧಿಗಳನ್ನು ಬೆಂಬಲಿಸಿತ್ತು.
ದೇಗುಲ ಪ್ರವೇಶ ವಿಚಾರದಲ್ಲಿ ಸುಪ್ರೀಂಕೋರ್ಟ್ ತೀರ್ಪು ಅನುಷ್ಠಾನ ಕಷ್ಟಸಾಧ್ಯ ಎಂದು ಅಮಿತ್ ಶಾ ಹೇಳಿಕೆ ನೀಡಿದ್ದರು. ಇದರ ವಿರುದ್ಧ ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್, ಕಾಂಗ್ರೆಸ್ ಹಾಗೂ ಬಹುಜನ ಸಮಾಜ ಪಕ್ಷ ತೀವ್ರ ವಾಗ್ದಾಳಿ ನಡೆಸಿದ್ದವು.
ಅಮಿತ್ ಶಾ ಹೇಳಿಕೆ ಕುರಿತಂತೆ ಪ್ರತಿಕ್ರಿಯಿಸಿದ ಸಂಬೀತ್ ಪಾತ್ರ, ನ್ಯಾಯಾಂಗದೊಂದಿಗೆ ಸಂಘರ್ಷದ ಯಾವುದೇ ಮಾತಿಲ್ಲ. ಆದರೆ, ಬಿಜೆಪಿ ಸಂಪ್ರದಾಯ, ನಂಬಿಕೆಗಳಲ್ಲಿ ಹೊಂದಿರುವುದಾಗಿ ಹೇಳಿದರು.
ಶಬರಿಮಲೆ ದೇಗುಲ ಅಥವಾ ಶಿವಲಿಂಗ ನಮ್ಮ ಪ್ರಮುಖ ನಂಬಿಕೆಯಾಗಿದ್ದು, ಪ್ರೀತಿ ಹಾಗೂ ಉದಾತ್ತ ಮಾನವೀಯ ಮೌಲ್ಯಗಳಲ್ಲಿ ಪಕ್ಷ ನಂಬಿಕೆ ಹೊಂದಿದೆ ಎಂದು ಹೇಳಿದ ಸಂಬೀತ್ ಪಾತ್ರ, ಸಂವಿಧಾನದ ಪ್ರಕಾರ ಬಿಜೆಪಿ ರಾಮ ಮಂದಿರ ನಿರ್ಮಿಸಲಿದೆ ಎಂದು ಹೇಳಿದರು.
Advertisement