ಚಂಡೀಘಢ: ಹರಿಯಾಣದ ಸಿಬಿಎಸ್ಇ ಟಾಪರ್ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಪ್ರಕರಣ ಆರೋಪಿಗಳ ಪೈಕಿ ಓರ್ವನನ್ನು ಪೋಲೀಸರು ಭಾನುವಾರ ಬಂಧಿಸಿದ್ದಾರೆ. ಇನ್ನೂ ಉಳಿದ ಇಬ್ಬರಿಗಾಗಿ ಹುಡುಕಾಟ ಮುಂದುವರಿದಿದೆ.
ಹರಿಯಾಣದ ಮಹೇಂದ್ರಗಢ ಜಿಲ್ಲೆಯಲ್ಲಿ ನಡೆದ ಘ್ಟನೆಯಲ್ಲಿ 2018ನೇ ಸಾಲಿನ ಸಿಬಿಎಸ್ ಇ ಪರೀಕ್ಷೆಯಲ್ಲಿ ಇಡೀ ದೇಶಕ್ಕೆ ಅಗ್ರ ಸ್ಥಾನ ಪಡೆದಿದ್ದ ಹರ್ಯಾಣ ಮೂಲದ ಯುವತಿಯನ್ನು ದುಷ್ಕರ್ಮಿಗಳು ಅಪಹರಿಸಿ ಸಾಮೂಹಿಕ ಅತ್ಯಾಚಾರ ಗೈದು ಬಸ್ ನಿಲ್ದಾಣದಲ್ಲಿ ಎಸೆದು ಹೋಗಿದ್ದರು.
ಹರಿಯಾಣ ಡಿಜಿಪಿ ಬಿಎಸ್ ಸಂಧು ಈ ಸಂಬಂಧ ತನಿಖೆ ತೀವ್ರಗೊಳಿಸಿದ್ದು ರಾಜಸ್ಥಾನ, ದೆಹಲಿ ಹಾಗೂ ಇತರೆಡೆಗಳಲ್ಲಿ ಸಹ ಆರೋಪಿಗಳ ಪತ್ತೆಗೆ ಕ್ರಮ ಜರುಗಿಸಲಾಗಿದೆ.
ಯುವತಿ ಸ್ವಗ್ರಾಮ ರೇವಾರಿಯ ನಿವಾಸಿಗಳೇ ಈ ಕೃತ್ಯ ನಡೆಸಿದ್ದಾರೆ ಎನ್ನುವುದು ತನಿಖೆಯಿಂದ ಸಾಬೀತಾಗಿದೆ.
ಇನ್ನೂ ವಿಶೇಷವೆಂದರೆ ಆರೋಪಿಗಳಲ್ಲಿ ಓರ್ವ ಭಾರತಿಯ ಸೇನೆಯ ಯೋಧನೂ ಸೇರಿದ್ದಾನೆ. ಯೋಧ ಪಂಕಜ್, ಮನೀಷ್ ಮತ್ತು ನಿಶು ಎನ್ನುವ ಮೂವರು ಆರೋಪಿಗಳು ಈ ದುಷ್ಕೃತ್ಯ ನಡೆಸಿದ್ದು ಘಟನೆ ನಡೆದ ದಿನದಿಂದಲೇ ಅವರು ಊರಿನಿಂದ ನಾಪತ್ತೆಯಾಗಿದ್ದರು.
ಹರಿಯಾಣ ಮುಖ್ಯಮಂತ್ರಿ ಮನೋಹರಲಾಲ್ ಖಟ್ಟರ್ ಸಹ ಭಾನುವಾರ ರಾಜ್ಯ ಪೋಲೀಸ್ ಮಹಾನಿರ್ದೇಶಕ ಬಿ.ಎಸ್.ಸಂಧು ಅವರನ್ನು ಕರೆಸಿ ತನಿಖೆಯ ಮಾಹಿತಿ ತಿಳಿದುಕೊಂಡಿದ್ದಾರೆ.
ಪಂಜಾಬ್ ಪ್ರವಾಸ ರದ್ದುಗೊಳಿಸಿದ ಮುಖ್ಯಮಂತ್ರಿ ಖಟ್ಟರ್ ಡಿಜಿಪಿ ಜತೆ ಸಭೆ ನಡೆಸಿದ್ದಲ್ಲದೆ ತನಿಖೆ ವಿಳಂಬಕ್ಕೆ ಕಾರಣವಾದ ರೇವಾರಿ ಜಿಲ್ಲಾ ಎಸ್ಪಿ ರಾಜೇಶ್ ದುಗ್ಗಲ್ ಅವರನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ.ಅಲ್ಲದೆ ಪ್ರಕರಣದಲ್ಲಿ ಭಾಗಿಯಾದವರೆಲ್ಲರ ಆರೋಪವನ್ನು ಖಚಿತಪಡಿಸುವಂತೆ ಡಿಜಿಪಿ ಅವರಿಗೆ ಖಟ್ಟರ್ ಖಡಕ್ ನಿರ್ದೇಶನ ನೀಡಿದ್ದಾರೆ.