ನವದೆಹಲಿ:ರಾಫೆಲ್ ಡೀಲ್ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ಮುಂದುವರೆಸಿದ್ದು, ಪ್ರಧಾನಿ ನರೇಂದ್ರ ಮೋದಿ ಉದ್ಯಮಿ ಅನಿಲ್ ಅಂಬಾನಿಗೆ ಮಾಹಿತಿ ಸೋರಿಕೆ ಮೂಲಕ ಗೌಪ್ಯತೆ ಉಲ್ಲಂಘಿಸಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಈ ವಿವಾದಾತ್ಮಕ ಒಪ್ಪಂದದ ಸಂಬಂಧ ರಕ್ಷಣಾ ಸಚಿವರು ಮಾತ್ರವಲ್ಲದೇ, ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯೆ ನೀಡಬೇಕೆಂದು ರಾಜ್ಯಸಭಾ ಉಪಸಭಾಪತಿ ಆನಂದ್ ಶರ್ಮಾ ಒತ್ತಾಯಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರೇ ನೇರವಾಗಿ 36 ವಿಮಾನಗಳನ್ನು ಕೊಳ್ಳುವ ಒಪ್ಪಂದ ಮಾಡಿಕೊಂಡಿದ್ದು, ರಾಫೆಲ್ ಜೆಟ್ ವಿಮಾನ ಅಭಿವೃದ್ದಿಪಡಿಸುವವರೊಂದಿಗೆ ಮಾತುಕತೆ ನಡೆಸಿದ್ದಾರೆ. ಈ ವಿಚಾರವನ್ನು ಎಚ್ ಎಎಲ್ ಗೆ ತಿಳಿಸಿಲ್ಲ ಬದಲಿಗೆ ಅನಿಲ್ ಅಂಬಾನಿಗೆ ಹೇಳಿದ್ದಾರೆ. ಈ ಮೂಲಕ ವಿಶ್ವಾಸಾರ್ಹತೆಗೆ ಧಕ್ಕೆ ತಂದಿದ್ದಾರೆ ಎಂದು ಆನಂದ್ ಶರ್ಮಾ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.
ಭಾರತ ಸರ್ಕಾರ ಪ್ರಸ್ತಾವಿತ ರಿಲಯನ್ಸ್ ರಕ್ಷಣಾ ಸಂಸ್ಥೆ ಹೆಸರನ್ನು ಕಳೆದ ವಾರ ಪ್ರಾನ್ಸಿನ ಮಾಜಿ ಅಧ್ಯಕ್ಷ ಫ್ರಾಂಕೊಯಿಸ್ ಹೊಲಾಂಡ್ ಬಹಿರಂಗಪಡಿಸಿದ ನಂತರ ರಾಫೆಲ್ ವಿಚಾರ ಹೆಚ್ಚು ಮುನ್ನಲೆಗೆ ಬಂದಿದೆ.
ಈ ಸಂಬಂಧ ನಾವು ರಕ್ಷಣಾ ಹಾಗೂ ವಿತ್ತ ಸಚಿವರಿಂದ ಪ್ರತಿಕ್ರಿಯೆ ಬಯಸಲು ಇಷ್ಟಪಡುವುದಿಲ್ಲ. ಈ ಬಗ್ಗೆ ಮೌನವೃತ ತಾಳಿರುವ ಪ್ರಧಾನಿ ನರೇಂದ್ರಮೋದಿ ಅವರೇ ಪ್ರತಿಕ್ರಿಯೆ ನೀಡಬೇಕೆಂದು ಆನಂದ್ ಶರ್ಮಾ ಆಗ್ರಹಿಸಿದರು.
ಕಾಂಗ್ರೆಸ್ ಆರೋಪವನ್ನು ರಿಲಯನ್ಸ್ ಸಮೂಹ ನಿರಾಕರಿಸಿದೆ. ನಾಗರಿಕ ವಿಮಾನಯಾನದೊಂದಿಗಿನ ತನ್ನ ಒಪ್ಪಂದದಲ್ಲಿ ಸರ್ಕಾರ ಯಾವುದೇ ರೀತಿಯಲ್ಲಿ ತೊಡಗಿಸಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದೆ.
2015 ಏಪ್ರಿಲ್ 10 ರಲ್ಲಿ ಪ್ಯಾರಿಸ್ ನಲ್ಲಿ ಫ್ರಾನ್ಸ್ ಅಧ್ಯಕ್ಷ ಹೊಲಾಂಡ್ ಜೊತೆಗಿನ ಮಾತುಕತೆಯಲ್ಲಿ ಪ್ರಧಾನಿ ನರೇಂದ್ರಮೋದಿ 36 ರಾಫೆಲ್ ಯುದ್ದ ವಿಮಾನಗಳ ಖರೀದಿ ಮಾಡುವುದಾಗಿ ಘೋಷಿಸಿದ್ದರು.
Advertisement