ವಿಶಿಷ್ಟ ಗುರುತಿನ ಸಂಖ್ಯೆ(ಆಧಾರ್)ಯ ಸಾಂವಿಧಾನಿಕ ಮಾನ್ಯತೆ ಕುರಿತು ಸುಪ್ರೀಂ ಕೋರ್ಟ್ ಬುಧವಾರ ಮಹತ್ವದ ತೀರ್ಪು ಪ್ರಕಟಿಸಲಿದೆ.
ದೇಶದ ಏಕೈಕ ಬಯೋಮೆಟ್ರಿಕ್ ರಾಷ್ಟ್ರೀಯ ಗುರುತಿನ ಚೀಟಿಯ ಸಾಂವಿಧಾನಿಕ ಮಾನ್ಯತೆ ಪ್ರಶ್ನಿಸಿ ದೇಶಾದ್ಯಂತ ಹಲವಾರು ಅರ್ಜಿಗಳು ಸವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. 38 ದಿನಗಳ ಕಾಲ ಎಲ್ಲಾ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ ತೀರ್ಪುನ್ನು ಕಾಯ್ದಿರಿಸಿದ್ದು, ನಾಳೆ ಪ್ರಕಟಿಸಲಿದೆ.
ಸುಪ್ರೀಂ ಕೋರ್ಟ್ ಈ ಹಿಂದೆ ಖಾಸಗಿತನವನ್ನು ಎತ್ತಿ ಹಿಡಿದು ತೀರ್ಪು ನೀಡಿದ್ದರಿಂದಾಗಿ ಆಧಾರ್ ತೀರ್ಪಿನ ಬಗ್ಗೆಯೂ ಈಗ ಕುತೂಹಲ ಮೂಡಿದೆ.
ಕೇಂದ್ರದ ಪರವಾಗಿ ಅಟೊರ್ನಿ ಜನರಲ್ ಕೆ.ಕೆ.ವೇಣುಗೋಪಾಲ್, ಹಿರಿಯ ವಕೀಲರಾದ ಕಪಿಲ್ ಸಿಬಲ್, ಪಿ.ಚಿದಂಬರಂ, ರಾಕೇಶ್ ದ್ವಿವೇದಿ, ಶ್ಯಾಮ್ ದಿವಾನ್, ಅರವಿಂದ್ ದಾತಾರ್ ಅವರು ವಿವಿಧ ಪಕ್ಷಗಳ ಪರವಾಗಿ ವಾದ ಮಂಡಿಸಿದ್ದಾರೆ.
ಸಂವಿಧಾನ ಪೀಠದಲ್ಲಿ ನ್ಯಾಯಮೂರ್ತಿಗಳಾದ ಎ.ಕೆ.ಸಿಕ್ರಿ, ಎ.ಎಮ್.ಖನ್ವಿಲ್ಕರ್, ಡಿ.ವೈ.ಚಂದ್ರಚೂಡ್ ಮತ್ತು ಅಶೋಕ್ ಭೂಷಣ್ ಕೂಡ ಇದ್ದಾರೆ.
ಆಧಾರ್ ಸಂಖ್ಯೆಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್ ನ ಮಾಜಿ ನ್ಯಾಯಾಧೀಶ ನ್ಯಾಯಮೂರ್ತಿ ಕೆ.ಎಸ್.ಪುಟ್ಟಸ್ವಾಮಿ ಅವರು ಮೂಲ ಅರ್ಜಿದಾರರಾಗಿದ್ದು, ಒಟ್ಟು 27 ಅರ್ಜಿದಾರರು ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.
ಆಧಾರ್ ಯೋಜನೆಗೆ ಸಾಂವಿಧಾನಿಕ ಸ್ವರೂಪ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ೨೦೧೬ರಲ್ಲಿ ಕಾಯ್ದೆ ಪಾಸು ಮಾಡಿತ್ತು.