ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಖಾಸಗಿ ಸಂಸ್ಥೆಗಳಲ್ಲಿರುವ ಆಧಾರ್ ಡೇಟಾ ಡಿಲಿಟ್ ಮಾಡಿಸುವುದು ದೊಡ್ಡ ಸವಾಲು: ತಜ್ಞರು

ಆಧಾರ್ ಕುರಿತು ಸುಪ್ರೀಂ ಕೋರ್ಟ್ ಬುಧವಾರ ನೀಡಿರುವ ಮಹತ್ವದ ತೀರ್ಪಿನಿಂದ ಭಾರತೀಯರು ನಿಟ್ಟೂಸಿರು ಬಿಡುವಂತಾಗಿದೆ....
ನವದೆಹಲಿ: ಆಧಾರ್ ಕುರಿತು ಸುಪ್ರೀಂ ಕೋರ್ಟ್ ಬುಧವಾರ ನೀಡಿರುವ ಮಹತ್ವದ ತೀರ್ಪಿನಿಂದ ಭಾರತೀಯರು ನಿಟ್ಟೂಸಿರು ಬಿಡುವಂತಾಗಿದೆ ನಿಜ. ಆದರೆ ಈಗಾಗಲೇ ಖಾಸಗಿ ಸಂಸ್ಥೆಗಳು ಹೊಂದಿರುವ ನಮ್ಮ ಆಧಾರ್ ಮಾಹಿತಿಯನ್ನು ಪರಿಶೀಲಿಸುವುದು ಅಥವಾ ಅದನ್ನು ಡಿಲಿಟ್ ಮಾಡುವುದು ದೊಡ್ಡ ಸವಾಲಿನ ಕೆಲಸ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಇಂದು ಆಧಾರ್ ಗೆ ಸಾಂವಿಧಾನಿಕ ಮಾನ್ಯತೆ ನೀಡಿ ತೀರ್ಪು ನೀಡಿರುವ ಸುಪ್ರಿಂ ಕೋರ್ಟ್‌, ಖಾಸಗಿ ಸಂಸ್ಥೆಗಳೊಂದಿಗೆ ಆಧಾರ್ ಮಾಹಿತಿ ಹಂಚಿಕೊಳ್ಳಲು ಅವಕಾಶ ಕಲ್ಪಿಸಿದ್ದ ಆಧಾರ್ ಕಾಯ್ದೆಯ ಸೆಕ್ಷನ್ 57 ಅನ್ನು ರದ್ದುಗೊಳಿಸಿದೆ.
ಸೆಕ್ಷನ್ 57 ರದ್ದುಗೊಳಿಸಿರುವುದರಿಂದ ಟೆಲೆಕಾಂ ಕಂಪನಿಗಳು, ಇ-ಕಾಮರ್ಸ್ ಸಂಸ್ಥೆಗಳು ಮತ್ತು ಎಲ್ಲಾ ಬ್ಯಾಂಕ್ ಗಳು ಸೇರಿದಂತೆ ಯಾವುದೇ ಖಾಸಗಿ ಸಂಸ್ಥೆ ಆಧಾರ್ ಬಯೋಮೆಟ್ರಿಕ್ ಮಾಹಿತಿ ಅಥವಾ ಡೇಟಾ ಹೊಂದುವಂತಿಲ್ಲ ಮತ್ತು ಅದನ್ನು ಕೇಳುವಂತಿಲ್ಲ. ಆದರೆ ಖಾಸಗಿ ಕಂಪನಿಗಳು ಈಗಾಗಲೇ ತಮ್ಮ ಬಳಿ ಆಧಾರ್ ಮಾಹಿತಿಯನ್ನು ದುರ್ಬಳಕೆ ಮಾಡಿಕೊಳ್ಳುವುದಿಲ್ಲ ಅಥವಾ ಅದನ್ನು ಮಾರಾಟ ಮಾಡುವುದಿಲ್ಲ ಎಂಬದನ್ನು ಖಚಿತಪಡಿಸಿಕೊಳ್ಳುವುದು ಹೇಗೆ? ಎಂದು ಸೈಬರ್ ಕಾನೂನು ತಜ್ಞ ಪವನ್ ದಗ್ಗಲ್ ಅವರು ಪ್ರಶ್ನಿಸಿದ್ದಾರೆ.
ಖಾಸಗಿ ಕಂಪನಿಗಳು ಹೊಂದಿರುವ ಆಧಾರ್ ಡೇಟಾವನ್ನು ಈಗ ಡಿಲಿಟ್ ಮಾಡುವ ಅಗತ್ಯ ಇದೆ. ಆದರೆ ಕಂಪನಿಗಳು ಡೇಟಾದ ಮತ್ತೊಂದು ಪ್ರತಿ ಉಳಿಸಿಕೊಂಡು, ತಮ್ಮ ವ್ಯವಹಾರಕ್ಕೆ ಬಳಸಿಕೊಳ್ಳುವುದಿಲ್ಲ ಎಂಬುದಕ್ಕೆ ಗ್ಯಾರಂಟಿ ಏನು? ಎಂದಿದ್ದಾರೆ.
ಆಧಾರ್ ಡೇಟಾ ಒಟ್ಟುಗೂಡಿಸುವ ಖಾಸಗಿ ಕಂಪೆನಿಗಳ ದೊಡ್ಡ ಜಾಲವೇ ಇದೆ. ಇದಕ್ಕಾಗಿ ಅವರು ಬಹಳಷ್ಟು ಹಣವನ್ನು ಖರ್ಚು ಮಾಡಿದ್ದಾರೆ. ಆದರೆ ಈಗ ಅವರ ಶ್ರಮ ನಿರರ್ಥಕವಾಗಿದೆ. ಆದರೆ ದೇಶಕ್ಕೆ ಈಗ ತಾಜಾ ಆಧಾರ್ ವ್ಯವಸ್ಥೆಯ ಅಗತ್ಯವಿದೆ ಎಂದು ದಗ್ಗಲ್ ಹೇಳಿದ್ದಾರೆ.
ದೇಶದ ಗಡಿಯಾಚೆ ಮತ್ತು ದೇಶದ ಕಾನೂನು ಮೀರಿ ಆಧಾರ್ ಡೇಟಾ ಸೇವ್ ಆಗಿದೆ. ಇದರ ದುರ್ಬಳಕೆಯನ್ನು ತಡೆಯಲು ತುರ್ತಾಗಿ ಕಾನೂನು ಮತ್ತು ಸೈಬರ್ ಭದ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ದಗ್ಗಲ್ ಅವರು ಎಚ್ಚರಿಸಿದ್ದಾರೆ.
ಆಧಾರ್ ಮಾಹಿತಿ ಸೋರಿಕೆಗೆ ಸಂಬಂಧಿಸಿದಂತೆ ದಗ್ಗಲ್ ಅವರು ಖಾಸಗಿ ಕಂಪನಿಗಳ ವಿರುದ್ಧ 50ಕ್ಕೂ ಹೆಚ್ಚು ಕೇಸ್ ಗಳನ್ನು ದಾಖಲಿಸಿದ್ದಾರೆ.
ಸುಪ್ರೀಂ ಕೋರ್ಟ್ ನ ಇಂದಿನ ತೀರ್ಪುನಿಂದ ಆಧಾರ್ ಯೋಜನೆ ಮತ್ತು ಕಾಯ್ದೆಯಲ್ಲಿ ಸಾಕಷ್ಟು ಬದಲಾವಣೆಯಾಗಿದ್ದು, ಅದರ ಉದ್ದೇಶಿತ ಕಾನೂನು ಬದ್ಧತೆ ಸಹ ನಾಶವಾಗಿದೆ. ಬಹುಪಾಲು ಜನರ ಕಾಳಜಿಯನ್ನು ಎತ್ತಿ ಹಿಡಿಯಲಾಗಿದೆ ಎಂದು ದೆಹಲಿ ಮೂಲದ ವಕೀಲ ಅಪರ್ ಗುಪ್ತಾ ಅವರು ಟ್ವೀಟ್ ಮಾಡಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com