ಜಮ್ಮು- ಕಾಶ್ಮೀರದಲ್ಲಿ ಮಾಧ್ಯಮ ಸ್ವಾತಂತ್ರ ಕಡಿತ ಮುಂದುವರಿಕೆ: ಎಡಿಟರ್ಸ್ ಗಿಲ್ಡ್  ಕಳವಳ

ಜಮ್ಮು- ಕಾಶ್ಮೀರದಲ್ಲಿ ಮಾಧ್ಯಮ ಸ್ವಾತಂತ್ರ ಕಡಿತ ಮುಂದುವರಿಕೆ: ಎಡಿಟರ್ಸ್ ಗಿಲ್ಡ್  ಕಳವಳ

ಕಣಿವೆ ರಾಜ್ಯ ಜಮ್ಮು- ಕಾಶ್ಮೀರದಲ್ಲಿ  ಸಂವಹನ ಸಂಪರ್ಕವನ್ನು ನಿರಂತರವಾಗಿ ಸ್ಥಗಿತಗೊಳಿಸಿರುವುದರ  ಬಗ್ಗೆ  ಭಾರತೀಯ ಸಂಪಾದಕರ ಒಕ್ಕೂಟ ಇಂದು ಕಳವಳ ವ್ಯಕ್ತಪಡಿಸಿದೆ. 
Published on

ಜಮ್ಮು- ಕಾಶ್ಮೀರ:  ಕಣಿವೆ ರಾಜ್ಯ ಜಮ್ಮು- ಕಾಶ್ಮೀರದಲ್ಲಿ  ಸಂವಹನ ಸಂಪರ್ಕವನ್ನು ನಿರಂತರವಾಗಿ ಸ್ಥಗಿತಗೊಳಿಸಿರುವುದರ  ಬಗ್ಗೆ  ಭಾರತೀಯ ಸಂಪಾದಕರ ಒಕ್ಕೂಟ ಇಂದು ಕಳವಳ ವ್ಯಕ್ತಪಡಿಸಿದೆ. 

ಪ್ರಸ್ತುತ ಬೆಳವಣಿಗೆಗಳ ಬಗ್ಗೆ ತಕ್ಕಮಟ್ಟಿಗೆ ನಿಖರವಾಗಿ ವರದಿ ಮಾಡುವಂತಹ ಮಾಧ್ಯಮಗಳ ಸ್ವಾತಂತ್ರ್ಯವನ್ನು ಕಡಿತಗೊಳಿಸಲಾಗಿದೆ ಎಂದು ಅಭಿಪ್ರಾಯಪಟ್ಟಿದೆ.

ಕೆಲವು ಸಂದರ್ಶಕ ಪತ್ರಕರ್ತರು ಕಣಿವೆಯಿಂದ ಹೊರಬಂದು ವರದಿ ಮಾಡಲು ಸಾಧ್ಯವಾಗಬಹುದಾದರೂ, ಆ ನೆಲದಲ್ಲಿನ ಕಣ್ಣು ಮತ್ತು ಕಿವಿಗಳಾದ ಸ್ಥಳೀಯ ಮಾಧ್ಯಮಗಳನ್ನು ಬಹುತೇಕವಾಗಿ ನಿರ್ಬಂಧಿಲಾಗಿದೆ.ಅಂತರ್ಜಾಲವಿಲ್ಲದೆ ಈಗ ಸುದ್ದಿಗಳ ಪ್ರಕಟಣೆ ಹಾಗೂ ಪ್ರಕ್ರಿಯೆ ಅಸಾಧ್ಯವೆಂದು ಸರ್ಕಾರಕ್ಕೆ ಚೆನ್ನಾಗಿ ಗೊತ್ತಿದೆ ಎಂದು  ಎಡಿಟರ್ಸ್ ಗಿಲ್ಡ್ ಬಿಡುಗಡೆ ಮಾಡಿರುವ  ಹೇಳಿಕೆಯಲ್ಲಿ ತಿಳಿಸಲಾಗಿದೆ.

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಒದಗಿಸುವ ಸಂವಿಧಾನದ 370 ನೇ ವಿಧಿ ರದ್ದು ಮಾಡಿ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಪ್ರದೇಶಗಳನ್ನು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಆದೇಶ ಹೊರಡಿಸಿದ ಬಳಿಕ ಸಂವಹನ ಸ್ಥಗಿತತೆ ಮುಂದುವರೆದಿರುವ ಕಾಶ್ಮೀರದ ಪರಿಸ್ಥಿತಿಯ ಬಗ್ಗೆ ಭಾರತೀಯ ಸಂಪಾದಕರ ಒಕ್ಕೂಟ ಬೆಳಕು ಚೆಲ್ಲಿದೆ.

ಕಾಶ್ಮೀರದಲ್ಲಿನ ಪ್ರಸ್ತುತ ಪರಿಸ್ಥಿತಿ ಸರ್ಕಾರದ ಸಂಸ್ಥೆಗಳು ಹಾಗೂ ಭದ್ರತೆ ಬಗ್ಗೆ ನಿಗಾ ವಹಿಸುವ ಪ್ರಜಾಸತಾತ್ಮಕ ಕರ್ತವ್ಯ ಹಾಗೂ ಸುದ್ದಿ ಪ್ರಸಾರ ಮಾಡುವ ಮಾಧ್ಯಮಗಳ ಪಾತ್ರ ಕಠಿಣವಾಗಿದ್ದು , ಸರ್ಕಾರ ಕೂಡಲೇ  ಮಾಧ್ಯಮಗಳಿಗೆ ಸಂಬಂಧಿತ ನಿರ್ಬಂಧಗಳನ್ನು ತೆಗೆದುಹಾಕಬೇಕಾಗಿದೆ. ದೇಶ ಸದೃಢತೆಯಲ್ಲಿ ಮಾಧ್ಯಮಗಳು ಭೀತಿ ಇಲ್ಲದೆ ಪ್ರಾಮಾಣಿಕವಾಗಿ  ಕರ್ತವ್ಯ ನಿರ್ವಹಿಸುವಂತಾಗಬೇಕು ಎಂದು ಹೇಳಲಾಗಿದೆ.

ಈ ಮಧ್ಯೆ ಜಮ್ಮು- ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ 370ನೇ ವಿಧಿಗೆ ರಾಷ್ಟ್ರಪತಿ ಅಂಕಿತ ಹಾಕಿರುವುದನ್ನು ಪ್ರಶ್ನಿಸಿ ಜಮ್ಮು- ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ.

X
Open in App

Advertisement

X
Kannada Prabha
www.kannadaprabha.com