ಜಮ್ಮು: ಜಮ್ಮು-ಕಾಶ್ಮೀರದ ರಜೌರಿ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನ ಸೇನೆ ಜೊತೆ ನಡೆದ ಗುಂಡಿನ ದಾಳಿಯಲ್ಲಿ ಭಾರತೀಯ ಸೇನೆಯ ಓರ್ವ ಯೋಧ ಹುತಾತ್ಮಗೊಂಡಿದ್ದಾರೆ.
ಇಂದು ನಸುಕಿನ ಜಾವ ಯೋಧ ರಜೌರಿ ಜಿಲ್ಲೆಯ ನೌಶೆರಾ ವಲಯದ ಕಾಲ್ಸಿಯಾ ಗ್ರಾಮದಲ್ಲಿ ಗಡಿ ನಿಯಂತ್ರಣ ರೇಖೆ ಬಳಿ ಕಾರ್ಯಾಚರಣೆಯಲ್ಲಿ ನಿರತವಾಗಿದ್ದ ವೇಳೆ ಪಾಕಿಸ್ತಾನ ಸೈನಿಕರು ಅಪ್ರಚೋದಿತ ಗುಂಡಿನ ದಾಳಿ ನಡೆಸಿದರು. ಅದರಲ್ಲಿ ಭಾರತೀಯ ಯೋಧನಿಗೆ ತೀವ್ರ ಗಾಯವಾಗಿದೆ.
ಯೋಧನನ್ನು ಕೂಡಲೇ ಮಿಲಿಟರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದರೂ ಕೂಡ ಚಿಕಿತ್ಸೆ ಫಲಕಾರಿಯಾಗದೆ ಹುತಾತ್ಮರಾಗಿದ್ದಾರೆ.
ಪಾಕಿಸ್ತಾನ ಯೋಧರನ್ನು ಹತ್ತಿಕ್ಕಲು ಭಾರತೀಯ ಸೇನೆ ಪರಿಣಾಮಕಾರಿಯಾಗಿ ಪ್ರತಿದಾಳಿ ನಡೆಸಿತು. ಪಾಕಿಸ್ತಾನ ಸೈನಿಕರಲ್ಲಿ ಯಾರೊಬ್ಬರಿಗೂ ಸಾವು-ನೋವುಗಳುಂಟಾದ ಬಗ್ಗೆ ವರದಿಯಾಗಿಲ್ಲ.
ಮೊನ್ನೆ ಆಗಸ್ಟ್ 17ರ ನಂತರ ರಜೌರಿ ಮತ್ತು ಪೂಂಚ್ ಜಿಲ್ಲೆಯಲ್ಲಿ ಪಾಕಿಸ್ತಾನ ಯೋಧರು ನಡೆಸಿದ ಶಸ್ತ್ರಾಸ್ತ್ರ ಮತ್ತು ಗುಂಡಿನ ದಾಳಿಯಲ್ಲಿ ಭಾರತೀಯ ಸೇನೆಯ ನಾಲ್ಕು ಯೋಧರು ಹುತಾತ್ಮರಾಗಿದ್ದಾರೆ.
Advertisement