ಮುಂಬೈ: ಮಹಾರಾಷ್ಟ್ರ ಸಂಪುಟ ವಿಸ್ತರಣೆಗೆ ಹಿರಿಯ ನಾಯಕರುಗಳು ತಲೆನೋವಾಗಿ ಪರಿಣಮಿಸಿದ್ದಾರೆ. ಹಿರಿಯರು ಕಿರಿಯ ನಾಯಕರುಗಳಿಗೆ ಸಚಿವ ಸ್ಥಾನವನ್ನು ಬಿಟ್ಟು ಕೊಡಲು ಸಿದ್ಧರಿಲ್ಲ. ಅವರಿಲ್ಲದೆ ಸರ್ಕಾರ ಏನು ಮಾಡಲು ಸಾಧ್ಯವಿಲ್ಲ ಎಂಬ ಕಲ್ಪನೆಯಿಂದ ಹೊರಬರಬೇಕಾಗಿದೆ ಎಂದು ಶಿವಸೇನೆ ಹೇಳಿದೆ.
ಯಾರ ಹೆಸರನ್ನೂ ಹೇಳದೆ ಇಂತಹ ನಾಯಕರುಗಳ ಉದ್ದೇಶವನ್ನು ಶಿವಸೇನಾ ಮುಖವಾಣಿ ಸಾಮ್ನದಲ್ಲಿ ಪ್ರಶ್ನಿಸಲಾಗಿದ್ದು, ದೇಶ ಅಥವಾ ರಾಜ್ಯ ಸೇವೆ ಮಾಡಲು ಸರ್ಕಾರದಲ್ಲಿ ಒಬ್ಬರಿಗೆ ಒಂದು ಖಾತೆ ಎಂಬ ಮನೋಭಾವ ಬೆಳೆಸಿಕೊಳ್ಳಬೇಕಾದ ಅಗತ್ಯವಿದೆ ಎಂದು ಹೇಳಲಾಗಿದೆ.
ಮಹಾರಾಷ್ಟ್ರ ಸಂಪುಟದಲ್ಲಿ ಹೊಸ ಮುಖಗಳಿಗೆ ಅವಕಾಶ ನೀಡಲು ಶಿವಸೇನೆ ಇಚ್ಚಿಸಿದೆ. ಆದರೆ, ಕಾಂಗ್ರೆಸ್ ಪಕ್ಷದ ಮಾಜಿ ಮುಖ್ಯಮಂತ್ರಿಗಳಾದ ಅಶೋಕ್ ಚವ್ಹಾಣ್, ಪೃಥ್ವಿರಾಜ್ ಚೌಹ್ಹಾಣ್, ಎನ್ ಸಿಪಿಯ ಅಜಿತ್ ಪವಾರ್, ದಿಲೀಪ್ ವಾಲ್ಸೆ ಪಟೇಲ್, ರಾಜೀಶ್ ಟೊಪ್, ನವಾಬ್ ಮಲ್ಲಿಕ್ ಮತ್ತಿತರರರು ಸಚಿವ ಸ್ಥಾನದ ಆಕಾಂಕ್ಷಿಗಳಾಗಿರುವುದು ತಲೆ ನೋವಾಗಿದೆ.
ಚಳಿಗಾಲದ ಅಧಿವೇಶನ ಮುಗಿದ ನಂತರ ರಾಜ್ಯ ಸಂಪುಟ ವಿಸ್ತರಣೆಯಾಗುವ ಸಾಧ್ಯತೆ ಇದೆ. ಇಂದಿನಿಂದ ಆರಂಭವಾಗಿರುವ ಅಧಿವೇಶನ ಡಿಸೆಂಬರ್ 21 ರಂದು ಮುಕ್ತಾಯವಾಗಲಿದೆ.
ಮುಖ್ಯಮಂತ್ರಿ ಹಾಗೂ ಶಿವಸೇನಾ ಅಧ್ಯಕ್ಷ ಉದ್ಧವ್ ಠಾಕ್ರೆ ಪ್ರಮುಖ ಗೃಹ ಖಾತೆಯನ್ನು ತಮ್ಮಲ್ಲಿಯೇ ಇಟ್ಟುಕೊಳ್ಳದಿರುವುದಕ್ಕೆ ಸಂಪಾದಕೀಯದಲ್ಲಿ ಅಚ್ಚರಿ ವ್ಯಕ್ತಪಡಿಸಿದೆ. ಈ ಹಿಂದೆ ದೇವೇಂದ್ರ ಪಢ್ನವೀಸ್ ಅವರೇ ಗೃಹ ಖಾತೆಯನ್ನು ತಮ್ಮ ಬಳಿ ಇಟ್ಟುಕೊಂಡಿದ್ದರು.
ಅಕ್ಟೋಬರ್ 21 ರಂದು ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಮುಗಿದ ಬಳಿಕ ಮಹಾರಾಷ್ಟ್ರ ವಿಕಾಸ್ ಆಘಾಡಿ ಹೆಸರಿನಲ್ಲಿ ಶಿವಸೇನಾ, ಎನ್ ಸಿಪಿ ಹಾಗೂ ಕಾಂಗ್ರೆಸ್ ಸರ್ಕಾರ ರಚನೆಗೊಂಡಿದೆ.
Advertisement