'ನೋಟ್ ಬ್ಯಾನ್’ನಂತೆಯೇ ಎನ್ಆರ್ಸಿ, ಎನ್ಪಿಆರ್ ದೇಶದ ಬಡವರ ಮೇಲಿನ ದಾಳಿ: ರಾಹುಲ್ ಗಾಂಧಿ
ರಾಯ್ಪುರ್(ಛತ್ತೀಸ್ ಘರ್): ರಾಷ್ಟ್ರೀಯ ನಾಗರಿಕರ ನೋಂದಣಿ ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಯೋಜನೆಗಳು ನೋಟ್ ಬ್ಯಾನ್ ನಂತೆಯೇ ದೇಶದ ಬಡ ಜನರ ಮೇಲಿನ ದಾಳಿ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿದ್ದಾರೆ.
ಸುದ್ದಿಗಾರರೊಡನೆ ಮಾತನಾಡಿದ ರಾಹುಲ್ "ಎನ್ಆರ್ಸಿ ಮತ್ತು ಎನ್ಪಿಆರ್, ಇದು ದೇಶದ ಬಡ ಜನರ ಮೇಲಿನ ದಾಳಿಯಾಗಿದೆ. ಈ ಹಿಂದೆ ನೋಟ್ ಬ್ಯಾನ್ ಸಹ ದೇಶದ ಬಡವರ ಮೇಲಿನ ದಾಲಿಯಾಗಿತ್ತು ಹಾಗೆ ಇದೂ ಕೂಡ ಬಡಜನರ ಮೇಲಿನ ದಾಳಿಯೇ ಆಗಿದೆ. ಅಧಿಕಾರಿಗಳ ಬಳಿಗೆ ತೆರಳಬೇಕು, ಬಡವರು ತಾವು ಹೋಗುತ್ತಾರೆ, ನಿಮ್ಮ ದಾಖಲೆಗಳನ್ನು ಪ್ರದರ್ಶಿಸಬೇಕಿದೆ. ಒಂದೊಮ್ಮೆ ನಿಮ್ಮ ಹೆಸರಲ್ಲಿ ತುಸುವೇ ವ್ಯತ್ಯಾಸವಾಗಿದ್ದರೆ ಲಂಚ ನೀಡಿ. ಈ ಲಂಚದ ಹಣ ಕೋಟ್ಯಾಂತರ ರು. ಮತ್ತೆ ಅದೇ 15 ಜನರಿಗೆ ಹೋಗುತ್ತದೆ." ಎಂದು ಆರೋಪಿಸಿದ್ದಾರೆ.
"ಇದು ಬಡ ಜನರ ಮೇಲಿನ ದಾಳಿ ಎಂದು ನಾನು ಹೇಳುತ್ತೇನೆ. ಬಡವರು ತಮಗೆ ಉದ್ಯೋಗಕ್ಕಾಗಿ ಕೇಳುತ್ತಿದ್ದಾರೆ. ಈ ಹಿಂದೆ ಆರ್ಥಿಕತೆ ಶೇ. 9ರ ಬೆಳವಣಿಗೆ ಸಾಧಿಸಿತ್ತು. ಈಗ ಅದು ಶೇಕಡಾ 4 ಕ್ಕೆ ಇಳಿದಿದೆ, ಅದೂ ಸಹ ಹೊಸ ವಿಧಾನದ ಮೂಲಕ ಜಿಡಿಪಿಯನ್ನು ಅಳತೆ ಮಾಡಲಾಗುತ್ತಿದೆ. ಹಳೆಯ ವಿಧಾನದಿಂದ ಇದು ಶೇಕಡಾ 2.5 ಆಗಿರುತ್ತದೆ.
"ನಿಮಗೆ ಆರ್ಥಿಕತೆಯ ಬಗ್ಗೆ ತಿಳಿದಿದೆ. 45 ವರ್ಷಗಳಲ್ಲಿ ಇಂದು ನಿರುದ್ಯೋಗ ಪ್ರಮಾಣ ಅತ್ಯಂತ ಹೆಚ್ಚಿದೆ. ಛತ್ತೀಸ್ ಘರ್ ಗೆ ಇದು ಅನ್ವಯಿಸಲ್ಲ ನಾವು ಇಲ್ಲಿ ರೈತರಿಗೆ ಸಹಾಯ ಮಾಡುತ್ತಿದ್ದೇವೆ, ಅವರಿಗೆ ಸರಿಯಾದ ಬೆಲೆಗಳನ್ನು ನೀಡುತ್ತೇವೆ. ಬಿಜೆಪಿ ಮತ್ತು ನರೇಂದ್ರ ಮೋದಿ ಅವರಿಗೆ ಭಾರತದ ಆರ್ಥಿಕತೆ ಏಕೆ ಕುಸಿಯುತ್ತಾ ಸಾಗಿದೆ ಎನ್ನುವುದನ್ನು ವಿವರಿಸಲು ಸಾಧ್ಯವಾಗಿಲ್ಲ.
""ಭಾರತ ಮತ್ತು ಚೀನಾ ಒಂದೇ ವೇಗದಲ್ಲಿ ಬೆಳೆಯುತ್ತಿವೆ ಎಂದು ಈ ಹಿಂದೆ ಜಗತ್ತು ಹೇಳುತ್ತಿತ್ತು ಆದರೆ ಈಗ ಜಗತ್ತು ಭಾರತದಲ್ಲಿ ಹಿಂಸಾಚಾರವನ್ನು ನೋಡುತ್ತಿದೆ, ಮಹಿಳೆಯರು ಸುರಕ್ಷಿತವಾಗಿಲ್ಲ, ನಿರುದ್ಯೋಗ ಹೆಚ್ಚುತ್ತಿದೆ. ಆದರೆ ಅದನ್ನು ವಿವರಿಸಲು ನರೇಂದ್ರ ಮೋದಿಗೆ ಸಾಧ್ಯವಾಗುತ್ತಿಲ್ಲ. ಬಹುಶಃ ಅವರಿಗೂ ಇದೇಕೆ ಹೀಗಾಗಿದೆ ಎಂದು ಅರ್ಥವಾಗಿಲ್ಲ.
"ದೇಶದ ಸಮಯ ವ್ಯರ್ಥ ಮಾಡುತ್ತಿದ್ದಾರೆ, 15 ಶ್ರೀಮಂತರಿಗೆ ಹಣವನ್ನು ನೀಡಲಾಗುತ್ತಿದೆಇಡೀ ಬಂಡವಾಳ ಮಾರುಕಟ್ಟೆ ಹಣ ನೇರವಾಗಿ ಅವರ ಜೇಬು ಸೇರುತ್ತಿದೆ. ಯಾರೂ ಏನನ್ನೂ ಖರೀದಿಸುತ್ತಿಲ್ಲ. ಕಾರ್ಖಾನೆಗಳು ಮುಚ್ಚಲ್ಪಡುತ್ತಿವೆ. ಇದು ಸರಳ ಅರ್ಥಶಾಸ್ತ್ರ, ಇಲ್ಲಿ ಕಷ್ಟವೇನೂ ಇಲ್ಲ. ಆದರೆ ಬಹುಶಃ ಇದನ್ನು ಅರ್ಥಮಾಡಿಕೊಳ್ಳಲು ಪ್ರಧಾನಮಂತ್ರಿಗೆ ಸಾಧ್ಯವಾಗುತ್ತಿಲ್ಲ "ಎಂದು ವಯನಾಡ್ ಸಂಸದ ರಾಹುಲ್ ವಿವರಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ