ನವದೆಹಲಿ: ಇತ್ತೀಚಿಗೆ ಮಂಡಿಸಲಾದ 2019-20ರ ಕೇಂದ್ರ ಬಜೆಟ್ ದೇಶದ ಸರ್ವಾಂಗೀಣ ಪ್ರಗತಿಯ ಗುರಿ ಹೊಂದಿದ್ದು, ಪ್ರತಿಯೊಬ್ಬ ನಾಗರಿಕರಿಗೂ ಇದರಿಂದ ಪ್ರಯೋಜನ ಆಗಲಿದೆ ಎಂದು ಹಂಗಾಮಿ ವಿತ್ತ ಸಚಿವ ಪಿಯೂಷ್ ಗೋಯೆಲ್ ತಿಳಿಸಿದ್ದಾರೆ.
ಕಾಂಗ್ರೆಸ್ ಹಾಗೂ ಎಡಪಕ್ಷಗಳ ಸಭಾತ್ಯಾಗದ ನಡುವೆ ಲೋಕಸಭೆಯಲ್ಲಿ ಅಂಗೀಕಾರಗೊಂಡ ಬಜೆಟ್ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಗೋಯೆಲ್, ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ಬಜೆಟ್ ನಿಂದ ಸೂಕ್ತ ಪ್ರಯೋಜನ ದೊರೆಯಲಿದೆ ಎಂದರು.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿಯಲ್ಲಿ ಎರಡು ಎಕರೆಗಿಂತ ಕಡಿಮೆ ಜಮೀನು ಹೊಂದಿರುವ 12 ಕೋಟಿ ರೈತರು ಪ್ರತಿವರ್ಷ 6 ಸಾವಿರ ರೂ. ಆರ್ಥಿಕ ನೆರವು ಪಡೆಯಲಿದ್ದಾರೆ. ಈ ಹಣ ಮೂರು ಕಂತಿನಲ್ಲಿ ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಆಗಲಿದೆ ಎಂದರು.
ಬಜೆಟ್ ನ ಒಟ್ಟಾರೇ ವೆಚ್ಚ 27. 84 ಲಕ್ಷ ಕೋಟಿಯಾಗಿದ್ದು, ಕಳೆದ ಸಾಲಿಗಿಂತ ಶೇ, 13 ರಷ್ಟು ಹೆಚ್ಚಾಗಿದೆ. ರಕ್ಷಣಾ ಕ್ಷೇತ್ರದ ವೆಚ್ಚ ಕಳೆದ ಸಾಲಿನಲ್ಲಿದ್ದ 2.85 ಲಕ್ಷ ಕೋಟಿಯಿಂದ 3. 05 ಲಕ್ಷ ಕೋಟಿಗೆ ಹೆಚ್ಚಳವಾಗಿದೆ ಎಂದು ತಿಳಿಸಿದರು.
5 ಲಕ್ಷ ವಾರ್ಷಿಕ ಆದಾಯ ಹೊಂದಿರುವ ವೈಯಕ್ತಿಕ ತೆರಿಗೆ ಪಾವತಿದಾರರಿಗೆ ಸಂಪೂರ್ಣ ತೆರಿಗೆ ಮೊತ್ತವನ್ನು ಮರು ಪಡೆಯಲಿದ್ದಾರೆ ವಾರ್ಷಿಕವಾಗಿ ಆರೂವರೆ ಲಕ್ಷ ಆದಾಯ ಪಡೆಯುವವರಿಗೂ ಕೂಡಾ ಆದಾಯ ತೆರಿಗೆ ಉಳಿತಾಯವಾಗಲಿದೆ ಎಂದು ಪಿಯೂಷ್ ಗೋಯೆಲ್ ಹೇಳಿದರು.
Advertisement