ಏಮ್ಸ್ ಆಸ್ಪತ್ರೆಗೆ ರಾಜನಾಥ್ ಸಿಂಗ್ ಭೇಟಿ: ಗಾಯಾಳು ಜಮ್ಮು-ಕಾಶ್ಮೀರ ಡಿಐಜಿ ಆರೋಗ್ಯ ವಿಚಾರಣೆ
ನವದೆಹಲಿ: ಜಮ್ಮು- ಕಾಶ್ಮೀರ ಡಿಐಜಿ ಅಮಿತ್ ಕುಮಾರ್ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಗೃಹ ಸಚಿವ ರಾಜನಾಥ್ ಸಿಂಗ್ ಇಂದು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.
ಫೆಬ್ರವರಿ 18 ರಂದು ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ನಡೆದ ಎನ್ ಕೌಂಟರ್ ವೇಳೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಅಮಿತ್ ಕುಮಾರ್ ಅವರನ್ನು ಅನಂತ್ ನಾಗ್ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಬಳಿಕ ಅವರ ದೇಹಾರೋಗ್ಯದಲ್ಲಿ ಕ್ಷಿಣತೆ ಕಂಡುಬಂದಿದ್ದರಿಂದ ಅವರನ್ನು ಏಮ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು.
ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಟ್ವೀಟ್ ಮಾಡಿರುವ ರಾಜನಾಥ್ ಸಿಂಗ್, ಅಮಿತ್ ಕುಮಾರ್ ಅಂತಹ ಅಧಿಕಾರಿಗಳು ತಮ್ಮ ಕಾರ್ಯದ ಮೂಲಕ ಸೇನೆಯ ಆತ್ಮಸ್ಛೈರ್ಯ ಹೆಚ್ಚಿಸಲಿದ್ದು, ಅವರ ಧೈರ್ಯಕ್ಕೆ ನಮಸ್ಕರಿಸುವುದಾಗಿ ಹೇಳಿದ್ದಾರೆ.
ಪುಲ್ವಾಮಾ ದಾಳಿ ಮಾಸ್ಟರ್ ಮೈಂಡ್ ಕಮ್ರಾನ್ ಆಲಿಯಾಸ್ ಗಾಜಿ ಬಂಧನಕ್ಕಾಗಿ ನಡೆದ ಎನ್ ಕೌಂಟರ್ ವೇಳೆಯಲ್ಲಿ ದಕ್ಷಿಣ ಕಾಶ್ಮೀರದ ಡಿಐಜಿಯಾಗಿದ್ದ ಅಮಿತ್ ಕುಮಾರ್ ಅವರ ಕಾಲಿಗೆ ಬುಲೆಟ್ ಬಿದಿತ್ತು. ಗುಂಡಿನ ಚಕಮಕಿಯಲ್ಲಿ ಅಮಿತ್ ಕುಮಾರ್, ಇತರ ಮೂವರು ಸೇನಾ ಅಧಿಕಾರಿಗಳು ಹಾಗೂ ಒಬ್ಬರು ನಾಗರಿಕರು ತೀವ್ರವಾಗಿ ಗಾಯಗೊಂಡಿದ್ದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ