ರಾಜ್ಯಸಭೆಯ ಕಲಾಪ ಕಳಪೆಯಾಗಿದೆ ಏಕೆಂದು ವಿರೋಧ ಪಕ್ಷಗಳನ್ನು ಯುವಜನತೆ ಪ್ರಶ್ನಿಸಬೇಕು; ಪ್ರಧಾನಿ ಮೋದಿ

ನಾನು ಯಾವ ಮಹತ್ವದ ಕೆಲಸ ಕಾರ್ಯಗತಗೊಳ್ಳುವ ಮೊದಲು ನಾನು ನನ್ನ ಯೋಜನೆಯನ್ನು ಎಂದಿಗೂ...
ನವದೆಹಲಿ: ನಾನು ಯಾವ ಮಹತ್ವದ ಕೆಲಸ ಕಾರ್ಯಗತಗೊಳ್ಳುವ ಮೊದಲು ನಾನು ನನ್ನ ಯೋಜನೆಯನ್ನು ಎಂದಿಗೂ ಬಹಿರಂಗಪಡಿಸುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ದೆಹಲಿಯ ವಿಜ್ಞಾನ ಭವನದಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರೀಯ ಯುವ ಸಂಸತ್ತು ಉತ್ಸವವನ್ನು ಉದ್ಘಾಟಿಸಿ ಮಾತನಾಡಿ ನಿನ್ನೆ ಪಾಕ್ ನೆಲದಲ್ಲಿ ಉಗ್ರ ತಾಣದ ಮೇಲೆ ಭಾರತೀಯ ವಾಯುಸೇನೆಯ ಬಾಂಬ್ ದಾಳಿ ಬಗ್ಗೆ ಪ್ರತಿಕ್ರಿಯೆ ನೀಡಿದರು.
ಸುಮಾರು 50 ಸಾವಿರ ದೇಶದ ವಿವಿಧ ಭಾಗಗಳಿಂದ ಬಂದ ಯುವಕ-ಯುವತಿಯರು ಭಾಗವಹಿಸಿದ್ದರು, ರಾಷ್ಟ್ರೀಯ ಯುವ ಸಂಸತ್ತು ಉತ್ಸವ 2019ರ ವಿಜಯಶಾಲಿಗಳಿಗೆ ಪ್ರಶಸ್ತಿ ನೀಡಿ ಖೇಲೊ ಇಂಡಿಯಾ ಆಪ್ ನ್ನು ಬಿಡುಗಡೆ ಮಾಡಿದರು. ಯುವಜನತೆಯಲ್ಲಿ ಫಿಟ್ ನೆಸ್ ಮತ್ತು ಕ್ರೀಡೆಯ ಬಗ್ಗೆ ಜಾಗೃತಿ ಮೂಡಿಸುವ ಆಪ್ ಇದಾಗಿದೆ. ಓದುಗರಿಗೆ ಮಹತ್ವದ ಮಾಹಿತಿ ಇದರಿಂದ ಸಿಗಲಿದೆ.
ಇಂದಿನ ಯುವಜನತೆ ಬಹು ವಿಧಗಳಲ್ಲಿ ಕೆಲಸ ಮಾಡುವ ಕೌಶಲ್ಯ ಹೊಂದಿದ್ದಾರೆ. ಇಂದಿನ ವೇಗದ ಸ್ಪರ್ಧಾತ್ಮಕ ಯುಗದಲ್ಲಿ ಮಹಾತ್ವಾಕಾಂಕ್ಷಿಗಳಾಗಿದ್ದಾರೆ. ನವ ಭಾರತದ ಉದಯಕ್ಕೆ ಯುವಜನತೆಯಲ್ಲಿ ಈ ಮನೋವೃತ್ತಿ ಬೇಕಾಗಿದೆ. ಯುವಕರಲ್ಲಿ ಆತ್ಮ ವಿಶ್ವಾಸ ಮೂಡಲು ನಮ್ಮ ಸರ್ಕಾರ ಎಲ್ಲಾ ರೀತಿಯಲ್ಲಿಯೂ ಪ್ರಯತ್ನಿಸುತ್ತಿದೆ ಎಂದರು.
16ನೇ ಲೋಕಸಭೆ ಮುಗಿಯುವ ಹಂತದಲ್ಲಿದ್ದು ಕಳೆದ 5 ವರ್ಷಗಳಲ್ಲಿ 205 ಮಸೂದೆಗಳು ಅನುಮೋದನೆಯಾಗಿವೆ. ಕಲಾಪಗಳಲ್ಲಿ ಶೇಕಡಾ 80ರಷ್ಟು ಸಫಲತೆ ಕಂಡುಬಂದಿದೆ. 15ನೇ ಲೋಕಸಭೆಗೆ ಹೋಲಿಸಿದರೆ 16ನೇ ಲೋಕಸಭೆ ಶೇಕಡಾ ಶೇಕಡಾ 20ರಷ್ಟು ಹೆಚ್ಚು ಕೆಲಸ ಮಾಡಿದೆ. ಆದರೆ ರಾಜ್ಯಸಭೆಯ ಕಲಾಪ ಮತ್ತು ಸಾಧನೆ ಕೇವಲ ಶೇಕಡಾ 8ರಷ್ಟು ಮಾತ್ರ. ರಾಜ್ಯಸಭೆಯ ಕಲಾಪದ ಬಗ್ಗೆ ನನಗೆ ತೃಪ್ತಿ, ಸಮಾಧಾನವಿಲ್ಲ. ಮೋದಿಯಿದ್ದರೆ ಅದು ಶೇಕಡಾ 200ರಷ್ಟು ಸಾಧನೆಯಾಗಬೇಕು ಎಂದರು.
ರಾಜ್ಯಸಭೆಯ ಸಾಧನೆ ಏಕೆ ನಿರೀಕ್ಷಿತ ಮಟ್ಟದಲ್ಲಿಲ್ಲ ಎಂದು ಯುವಜನತೆ ವಿರೋಧ ಪಕ್ಷದವರನ್ನು ಪ್ರಶ್ನೆ ಮಾಡಬೇಕು, ರಾಜ್ಯಸಭೆಯಲ್ಲಿ ವಿರೋಧ ಪಕ್ಷಗಳಿಗೆ ಮಾತನಾಡಲು ಸಾಕಷ್ಟು ಅವಕಾಶಗಳಿವೆ. ನಾವು ಸದನದಲ್ಲಿ ಮಾತನಾಡುವ ಮಾತುಗಳು ದೇಶದ ಜನರಿಗೆ ತಲುಪಬೇಕು, ಆದರೆ ವಿರೋಧ ಪಕ್ಷಗಳು ಸಕ್ರಿಯವಾಗಿ ಭಾಗವಹಿಸಿಲ್ಲ ಎಂದು ಆರೋಪಿಸಿದರು.
ಯುವಕರು ತಮ್ಮ ಮನೆಗಳಿಗೆ ಹೋಗಿ ತಮ್ಮ ರಾಜ್ಯಗಳಲ್ಲಿ ಕಾರ್ಯಕ್ರಮ ಆಯೋಜಿಸಿ ರಾಜ್ಯಸಭಾ ಸದಸ್ಯರನ್ನು ಆಹ್ವಾನಿಸಿ ಮಾಡಿರುವ ಕೆಲಸಗಳ ಬಗ್ಗೆ ಅವರನ್ನು ಪ್ರಶ್ನಿಸಬೇಕು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com