ನ್ಯಾಯಾಂಗ ಪ್ರಕ್ರಿಯೆ ಮುಗಿದರಷ್ಟೇ ರಾಮ ಮಂದಿರಕ್ಕೆ ಸುಗ್ರೀವಾಜ್ಞೆ: ನರೇಂದ್ರ ಮೋದಿ

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕುರಿತು ಸುಗ್ರೀವಾಜ್ಞೆ ತರುವ ವಿಚಾರ ಇಲ್ಲ, ಹಾಗೊಂದು ವೇಳೆ ಯಾವುದೇ ಕ್ರಮ...
ನರೇಂದ್ರ ಮೋದಿ
ನರೇಂದ್ರ ಮೋದಿ
ನವದೆಹಲಿ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕುರಿತು ಸುಗ್ರೀವಾಜ್ಞೆ ತರುವ ವಿಚಾರ ಇಲ್ಲ, ಹಾಗೊಂದು ವೇಳೆ ಯಾವುದೇ ಕ್ರಮ ತೆಗೆದುಕೊಳ್ಳುವುದಾದಲ್ಲಿ ಅದು  ನ್ಯಾಯಾಂಗ ಪ್ರಕ್ರಿಯೆ ಮುಗಿದ ನಂತರವಷ್ಟೇ ನಿರ್ಧಾರವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಎ ಎನ್ ಐ ಸುದ್ದಿಸಂಸ್ಥೆಯ ಸ್ಮಿತಾ ಪ್ರಕಾಶ್ ಅವರಿಗೆ ನೀಡಿದ್ದ ಸಂದರ್ಶನದಲ್ಲಿ ಮಾತನಾಡಿದ ಮೋದಿ ಕಾಂಗ್ರೆಸ್ ವಕೀಲರು ಸುಪ್ರೀಂ ಕೋರ್ಟ್ ನಲ್ಲಿ ಅಡ್ಡಿಯುಂಟುಮಾಡುತ್ತಿರುವ ಕಾರಣ ಅಯೋಧ್ಯೆ ಕುರಿತ ನ್ಯಾಯಾಲಯದ ತೀರ್ಮಾನ ವಿಳಂಬವಾಗುತ್ತಿದೆ ಎಂದಿದ್ದಾರೆ.
"ಸಂವಿಧಾನದ ಪರಿಧಿಯೊಳಗೇ ಈ ವಿವಾದಕ್ಕೆ ಪರಿಹಾರವಿದೆ ಎಂದು ಆನ್ವು ಈ ಮುನ್ನವೇ ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಹೇಳಿದ್ದೇವೆ." ಇದೊಂದು ಭಾವನಾತ್ಮಕ ವಿಚಾರವಷ್ಟೆಯೇ ಎಂಬ ಬಗ್ಗೆ ಪ್ರಶ್ನಿಸಿದಾಗ ಮೋದಿ ರಾಮಮಂದಿರದ ಕುರಿತು ಬಿಜೆಪಿ ನಿಲುವನ್ನು ಮೇಲಿನಂತೆ ಸ್ಪಷ್ಟಪಡಿಸಿದ್ದಾರೆ. ಯೋಧ್ಯೆಯಲ್ಲಿ ಭವ್ಯವಾದ ರಾಮ ಮಂದಿರವನ್ನು ನಿರ್ಮಾಣ ಮಾಡುವುದಾಗಿ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಹೇಳಿದೆ.
ಇತ್ತೀಚೆಗೆ, ದೇವಾಲಯದ ನಿರ್ಮಾಣ ಪ್ರಕ್ರಿಯೆಯನ್ನು ತ್ವರಿತಗೊಳಿಸುವುದರ ಕುರಿತು ಪಕ್ಷ ಹಾಗೂ ಸಂಘಪರಿವಾರದ ನಡುವೆ ವಾಗ್ವಾದಗಳು ಏರ್ಪಟ್ಟಿದ್ದವು.ಸಂಘಪರಿವಾರ ಅಯೋಧ್ಯೆ ವಿವಾದ ಹಾಗೂ ರಾಮಮಂದಿರ ನಿರ್ಮಾಣ ವಿಳಂಬದ ಕುರಿತಂತೆ ಅತೃಪ್ತಿ ವ್ಯಕ್ತಪಡಿಸಿದ್ದವು. ಅದೇ ವೇಳೆ ಮಂದಿರ ನಿರ್ಮಾಣಕ್ಕಾಗಿ ಸುಗ್ರೀವಾಜ್ಞೆ ತರಲು ಒತ್ತಾಯಿಸಿದೆ. ತ್ರಿವಳಿ ತಲಾಕ್ ವಿಚಾರದಲ್ಲಿ ಸರ್ಕಾರ ನಡೆದುಕೊಂಡ ರೀತಿಯಲ್ಲಿಯೇ ರಾಮಮಂದಿರ ನಿರ್ಮಾಣದ ಕುರಿತಂತೆ ಸಹ ಕಟ್ಟುನಿಟ್ಟಾದ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಅವುಗಳು ಬಯಸಿದೆ.
ಈಗ ವಿವಾದ ನ್ಯಾಯಾಲಯದಲ್ಲಿದ್ದು ಒಮ್ಮೆ ನ್ಯಾಯಾಂಗದ ಪ್ರಕ್ರಿಯೆ ಮುಗಿದ ನಂತರ ಸರ್ಕಾರದ ಭಾಗವಾಗಿ ನಾವು ನಮ್ಮ ಪ್ರಯತ್ನ ಮಾಡುತ್ತೇವೆ.ರಾಮಮಂದಿರ ನಿರ್ಮಾಣಕ್ಕಾಗಿ ನಾವು ನಮ್ಮೆಲ್ಲಾ ರೀತಿಯ ಪ್ರಯತ್ನಕ್ಕೆ ಸಿದ್ದರಿದ್ದೇವೆ"
ರಾಮಮಂದಿರ ವಿವಾದವು ಜನವರಿ 4ರಿಂದ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆಗೆ ಬರಲಿದ್ದು ಪ್ರತಿದಿನದ ನಿರಂತರ ವಿಚಾರಣೆಗಾಗಿ ಇದಾಗಲೇ ಸುಪ್ರೀಂ ಕೋರ್ಟ್ ನಲ್ಲಿ ಮನವಿಯನ್ನು ಸಲ್ಲಿಸಲಾಗಿದೆ.
ತ್ರಿವಳಿ ತಲಾಕ್ ಕುರಿತ ಸುಗ್ರೀವಾಜ್ಞೆ ತಂದದ್ದು ಸಹ ತ್ರಿವಳಿ ತಲಾಕ್ ಸಂಬಂಧ ಸುಪ್ರೀಂ ಕೋರ್ಟ್ ತೀರ್ಪಿತ್ತ ಬಳಿಕವೇ ಆಗಿದ್ದು ಸರ್ಕಾರವು ನ್ಯಾಯಾಂಗದ ತೀರ್ಪನ್ನು ಎಂದಿಗೂ ಗೌರವಿಸಿದೆ ಎಂದು ಪ್ರಧಾನಿ ಹೇಳಿದ್ದಾರೆ.  2017ರ ಸರ್ವೋಚ್ಚ ನ್ಯಾಯಾಲಯದ ತೀರ್ಪು ಉಲ್ಲೇಖಿಸಿದ ಮೋದಿ ಸುಪ್ರೀಂ ಕೋರ್ಟ್ ಮುಸ್ಲಿಮರ ತ್ರಿವಳಿ ತಲಾಖ್ ಆಚರಣೆಯನ್ನು ನಿಷೇಧಿಸಿತ್ತು, ಆ ಬಳಿಕವೇ ಸರ್ಕಾರ ಈ ಕುರಿತಂತೆ ಕ್ರಮಕ್ಕೆ ಮುಂದಾಗಿತ್ತು ಎಂದು ಅವರು ಹೇಳಿದ್ದಾರೆ. ತ್ರಿವಳಿ ತಲಾಕ್ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲಾಯಿತು, ಈ ಮಸೂದೆ ಲೋಕಸಭೆಯಿಂದ ಅಂಗೀಕರಿಸಲ್ಪಟ್ಟಿದೆ ಮತ್ತು ರಾಜ್ಯಸಭೆಯಲ್ಲಿ ಚರ್ಚೆ ನಡೆಯಬೇಕಿದೆ.
"ಕಳೆದ 70 ವರ್ಷಗಳಲ್ಲಿ ಸರ್ಕಾರ ನಡೆಸುವವರು ಅಯೋಧ್ಯೆ ವಿವಾದವನ್ನು ಪರಿಹರಿಸಲು  ಪ್ರಯತ್ನಿಸಿದ್ದಾರೆ ಎನ್ನುವುದನ್ನು ಯಾರೂ ನಿರಾಕರಿಸುವಂತಿಲ್ಲ. ಕಾಂಗ್ರೆಸ್ ಸಹ ಈಗ ಈ ವಿಚಾರದಲ್ಲಿ ಉದ್ದೇಶಪೂರ್ವಕ ಅಡ್ಡಿಗಳನ್ನು ತರಬಾರದು ನ್ಯಾಯಾಂಗ ಪ್ರಕ್ರಿಯೆ ತನ್ನದೇ ಆದ ರೀತಿಯಲ್ಲಿ ಮುಂದುವರಿಯಲು ಅವಕಾಶ ಕಲ್ಪಿಸಬೇಕು ಎಂದು ಮೋದಿ ಹೇಳಿದ್ದಾರೆ.
ರಾಷ್ಟ್ರೀಯ ಶಾಂತಿಯ ಮತ್ತು ಸಂತೋಷಕ್ಕಾಗಿ ನಾನು ಕಾಂಗ್ರೆಸ್ ಗೆ ಕೇಳಿಕೊಳ್ಳುತ್ತೇನೆ, ಈ ವಿಚಾರದಲ್ಲಿ ರಾಜಕೀಯ ಮಾಡಬಾರದು.ನ್ಯಾಯಾಲಯಕ್ಕೆ ಅದರ ತೀರ್ಮಾನಕ್ಕೆ ಬರಲು ಅವಕಾಶ ನೀಡಿ ಆ ಪಕ್ಷದ ವಕೀಲರು ತಮ್ಮ ವಾದವನ್ನು ನಿಲ್ಲಿಸಬೇಕು. ಇದಲ್ಲದೆ ಕಾಂಗ್ರೆಸ್ ಸೇರಿದಂತೆ ಎಲ್ಲಾ ಪಕ್ಷಗಳೂ ಒಟ್ಟಾಗಿ ನ್ಯಾಯಾಲಯದಲ್ಲಿ ವಾದಿಸುವುದಕ್ಕೆ ವಕೀಲರನ್ನು ನೇಮಕ ಮಾಡಬೇಕು. ಆ ಪ್ರಕಾರವಾಗಿ ನ್ಯಾಯಾಲಯಕ್ಕೆ ಇದು ಅತಿ ಶೀಘ್ರವಾಗಿ ಬಗೆಹರಿಯಬೇಕಾದ ವಿಚಾರ ಎನ್ನುವುದನ್ನು ಮನದಟ್ಟು ಮಾಡಿಸಬೇಕು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com