ತಿರುವನಂತಪುರಂ: ತೀವ್ರ ವಿರೋಧದ ನಡುವೆಯೂ ಬಿಂದು ಹಾಗೂ ಕನಕದುರ್ಗಾ ಎಂಬ ಇಬ್ಬರು ಮಹಿಳೆಯರು ಸದ್ದಿಲ್ಲದೆ ಶಬರಿಮಲೆ ದೇಗುವ ಪ್ರವೇಶಿಸುವ ಮೂಲಕ 800 ವರ್ಷಗಳ ಸಂಪ್ರದಾಯವನ್ನು ಮುರಿದಿದ್ದು ಇದೀಗ ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ.
ಕಳೆದ ನವೆಂಬರ್ ತಿಂಗಳಲ್ಲಿ ಬಿಂದು ಹಾಗೂ ಕನಕದುರ್ಗಾ ಇಬ್ಬರು ಅಯ್ಯಪ್ಪನ ದರ್ಶನಕ್ಕೆ ಯತ್ನಿಸಿ ವಿಫಲವಾಗಿದ್ದರು. ಆದರೆ ಎರಡನೇ ಬಾರಿಗೆ ಪೊಲೀಸರ ಬಿಗಿ ಭದ್ರತೆಯೊಂದಿಗೆ ಅಯ್ಯಪ್ಪನ ದರ್ಶನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
42 ವರ್ಷದ ಬಿಂದು ಕಣ್ಣೂರು ವಿಶ್ವವಿದ್ಯಾನಿಲಯದ ಕಾಲೇಜು ಅಧ್ಯಾಪಕರಾಗಿದ್ದಾರೆ. ಇನ್ನು 44 ವರ್ಷದ ಕನಕ ದುರ್ಗಾ ಮಲ್ಲಪುರಂನ ಅಂಗಡಿಪುರಂನ ನಾಗರಿಕ ಪೂರೈಕೆ ಇಲಾಖೆಯಲ್ಲಿ ತಾತ್ಕಾಲಿಕ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಬಿಂದು ಹಾಗೂ ಕನಕ ದುರ್ಗಾ ಇಬ್ಬರು ಅಯ್ಯಪ್ಪನ ದರ್ಶನ ಪಡೆದಿದ್ದಾರೆ ಎಂಬ ಸುದ್ದಿ ಹೊರಬರುತ್ತಿದ್ದಂತೆ ಉದ್ರಿಕ್ತರು ಇಬ್ಬರ ಮನೆಯ ಮೇಲೆ ಕಲ್ಲು ತೂರಾಟ ನಡೆಸಿದ್ದು ಪರಿಣಾಮ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಸದ್ಯ ನೂರಾರು ಪೊಲೀಸರು ಇಬ್ಬರ ಮನೆಗಳಿಗೆ ಭದ್ರತೆ ನೀಡಿದ್ದಾರೆ.