ನವದೆಹಲಿ: 77 ದಿನಗಳ ನಂತರ ಬುಧವಾರ ಮತ್ತೆ ಸಿಬಿಐ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡ ಅಲೋಕ್ ವರ್ಮಾ ಅವರು ಹಂಗಾಮಿ ಮುಖ್ಯಸ್ಥ ಎಂ. ನಾಗೇಶ್ವರ್ ರಾವ್ ಅವರ ಬಹುತೇಕ ವರ್ಗಾವಣೆ ಆದೇಶಗಳನ್ನು ರದ್ದುಗೊಳಿಸಿದ್ದಾರೆ.
ಕೇಂದ್ರ ಸರ್ಕಾರ ಅಲೋಕ್ ವರ್ಮಾ ಅವರನ್ನು ಕಡ್ಡಾಯ ರಜೆ ಮೇಲೆ ಕಳುಹಿಸಿದ ನಂತರ ಹಂಗಾಮಿ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಿದ್ದ ನಾಗೇಶ್ವರ್ ರಾವ್ ಅವರು ವರ್ಮಾ ತಂಡದಲ್ಲಿದ್ದ 10 ಸಿಬಿಐ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದರು.
ಕೇಂದ್ರ ಸರ್ಕಾರ ತಮ್ಮನ್ನು ಕಡ್ಡಾಯ ರಜೆ ಮೇಲೆ ಕಳುಹಿಸಿದ್ದನ್ನು ಪ್ರಶ್ನಿಸಿ ವರ್ಮಾ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ಕಡ್ಡಾಯ ರಜೆ ರದ್ದುಗೊಳಿಸಿ, ವರ್ಮಾ ಅವರನ್ನು ಮತ್ತೆ ಸಿಬಿಐ ಮುಖ್ಯಸ್ಥರನ್ನಾಗಿ ನೇಮಿಸಿತ್ತು.
ಸಿಬಿಐ ನಿರ್ದೇಶಕ ಆಲೋಕ್ ಕುಮಾರ್ ವರ್ಮಾ ಅವರ ಅಧಿಕಾರಾವಧಿಯು ಇದೇ ಜನವರಿ 31ರಂದು ಅಂತ್ಯಗೊಳ್ಳಲಿದೆ.